ತಿರುವನಂತಪುರಂ: 'ಓಣಂ' - ಕೇರಳಂ ಸಾಂಸ್ಕೃತಿಕ ಪರಂಪರೆ ಮತ್ತು ಕೋಮು ಸೌಹಾರ್ದತೆಯನ್ನು ಬಿಂಬಿಸುವ ಹಬ್ಬ.
ಓಣಂ ಎಂದಾಕ್ಷಣ ಮನೆಯಂಗಳದಲ್ಲಿ ಬಿಡಿಸುವ ಹೂವಿನ ರಂಗೋಲಿ, ಹೊಸ ಬಟ್ಟೆಯ ಸಂಭ್ರಮ, ಬಾಳೆ ಎಲೆಯೂಟದ ಚಿತ್ರಗಳು ಕಣ್ಮುಂದೆ ಬರುತ್ತವೆ. ಆದಾಗ್ಯೂ, ಇದು ಕೇವಲ ಹಬ್ಬವಷ್ಟೇ ಅಲ್ಲ; ಅದೊಂದು ಭಾವನೆ. ಮಾನವೀಯತೆಯನ್ನು ಸಾರುವ ಆಚರಣೆಯೂ ಹೌದು. ಇದೀಗ ಅದಕ್ಕೊಂದು ತಾಜಾ ಉದಾಹರಣೆ ಸಿಕ್ಕಿದೆ.
ಕಣ್ಣೂರು ಜಿಲ್ಲೆಯ ಚಾಲಾ ಪಟ್ಟಣದ ಯುವಕರ ಗುಂಪೊಂದು, ಮೂತ್ರಪಿಂಡದ ಅನಾರೋಗ್ಯದಿಂದ ಬಳಲುತ್ತಿರುವ 16 ವರ್ಷದ ಯುವತಿಯ ಚಿಕಿತ್ಸೆಗೆ ಹಣ ಸಂಗ್ರಹಿಸುವ ಸಲುವಾಗಿ ಹೂ ಮತ್ತು ಪಾಯಸ ಮಾರಾಟ ಮೇಳ ಆಯೋಜಿಸಿದೆ.
ಚಾಲಾ ಸರ್ಕಾರಿ ಶಾಲೆಯಲ್ಲಿ 11ನೇ ತರಗತಿ ಓದುತ್ತಿರುವ ಶ್ರೀದೇವನಾ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಅಂದಾಜು ₹ 30 ಲಕ್ಷ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ಶ್ರೀದೇವನಾಗೆ ನೆರವಾಗಲು, ಹಬ್ಬವನ್ನು ನೆಪಮಾಡಿಕೊಂಡು ಮುಂದೆ ಬಂದಿರುವುದು 'ಚಂಗ್ಸ್ ಕೂಟಾಯ್ಮ' ಯುವಕರ ತಂಡ.
ಓಣಂ ಸಂದರ್ಭದಲ್ಲಿ ಕೇರಳಂನಾದ್ಯಂತ ಹೂವಿನ ರಂಗೋಲಿ (ಅತ್ತಪೂಕಳಂ) ಬಿಡಿಸುವುದು ವಾಡಿಕೆ. ಅದಕ್ಕಾಗಿ ಸಾಕಷ್ಟು ಕಡೆ ತಾತ್ಕಾಲಿಕ ಹೂವಿನ ಅಂಗಡಿಗಳು ತಲೆ ಎತ್ತುತ್ತವೆ. ಅದೇ ರೀತಿ ಪಾಯಸವೂ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತದೆ.
ಹೀಗಾಗಿ ಯುವಕರು ಪಟ್ಟಣದ ವಿವಿಧೆಡೆ ಹೂ ಮತ್ತು ಪಾಯಸ ಮಾರಾಟ ನಡೆಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಕರ್ನಾಟಕದಿಂದ ಭಾರಿ ಪ್ರಮಾಣದಲ್ಲಿ ಹೂ ಖರೀದಿಸಿದ್ದಾರೆ.
'ಹೂ ಮತ್ತು ಪಾಯಸ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಶ್ರೀದೇವನಾಳ ಚಿಕಿತ್ಸೆಗೆ ನೀಡಲು ಯೋಜಿಸಿದ್ದೇವೆ' ಎಂದು ಸಂಘಟಕ ನಿಖೇಶ್ ಎಂಬವರು ಹೇಳಿದ್ದಾರೆ.



