ನವದೆಹಲಿ: ನೀಟ್ ಅಕ್ರಮ ವಿರೋಧಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆಸಿದ 23 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಮುಕ್ತಾಯಗೊಂಡಿದ್ದರೂ, ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ಇನ್ನು ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಆದಾಗ್ಯೂ, ದೈಹಿಕ ಅಶಕ್ತತೆಯನ್ನು ಲೆಕ್ಕಿಸದೆ ಪ್ರತಿಭಟನೆ ವೇಳೆ ಬಂಧಿತರಾದ ವಿದ್ಯಾರ್ಥಿಗಳ ಬಿಡುಗಡೆಗಾಗಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಹೋರಾಟ ಮುಂದುವರಿಸಿದ್ದಾರೆ.
ಗಾಯದ ಗುರುತುಗಳೇ ಸಾಕ್ಷಿ: ನೀಟ್ ಪ್ರತಿಭಟನೆ ವೇಳೆ ಪೋಲಿಸ್ ದೌರ್ಜನ್ಯ ನೆನೆದ ನೇಹಾ
ಒಂದು ಸಾಲಿನಲ್ಲಿನೀಟ್ ಅಕ್ರಮದ ವಿರುದ್ಧ 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ನೇಹಾ ಬೋರಾ, ಪ್ರತಿಭಟನೆ ವೇಳೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ವಿದ್ಯಾರ್ಥಿಗಳ ಹೋರಾಟದ ಕುರಿತು ವಿವರಿಸಿದ್ದಾರೆ.
ಏನು? ಏಕೆ? ಹೇಗೆ?
ನೇಹಾ ಬೋರಾ ನಡೆಸಿದ 23 ದಿನಗಳ ಉಪವಾಸ ಸತ್ಯಾಗ್ರಹದ ಉದ್ದೇಶವೇನು?
ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮಗಳನ್ನು ವಿರೋಧಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಈ ಹೋರಾಟವನ್ನು ನಡೆಸಿದ್ದರು.
ಜುಲೈ 20ರ ಪ್ರತಿಭಟನೆ ವೇಳೆ ಜಂತರ್ ಮಂತರ್ನಲ್ಲಿ ನಡೆದ ಘಟನೆಗಳೇನು?
ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು, ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡರು.
ಬಂಧಿತ ವಿದ್ಯಾರ್ಥಿಗಳ ಬಿಡುಗಡೆಗೆ ಕೈಗೊಂಡ ಕ್ರಮಗಳೇನು?
ಪ್ರತಿಭಟನೆ ಮುಗಿದ ನಂತರ ನೇಹಾ ಬಿಹಾರಕ್ಕೆ ತೆರಳಿ, ಅಲ್ಲಿ ಬಂಧಿತರಾಗಿದ್ದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಿಡುಗಡೆಗಾಗಿ ಡಿಜಿಪಿಯನ್ನು ಭೇಟಿಯಾಗಿ ಸತತ ಪ್ರಯತ್ನ ನಡೆಸಿದರು.
ನೇಹಾ ಬೋರಾ ಅವರ ಹಿನ್ನೆಲೆ ಮತ್ತು ಹೋರಾಟದ ದಾರಿ ಏನು?
29 ವರ್ಷದ ನೇಹಾ ಬೋರಾ, ಜೆಎನ್ಯುನಲ್ಲಿ ಪಿಎಚ್ಡಿ ಮಾಡುತ್ತಿದ್ದು, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹಾಗೂ ಶೋಷಿತ ಸಮುದಾಯಗಳ ಪರವಾಗಿ ದೀರ್ಘಕಾಲದಿಂದ ಹೋರಾಡುತ್ತಿದ್ದಾರೆ.
ಈ ಹೋರಾಟದಿಂದ ಪೋಷಕರ ಮನಸ್ಥಿತಿಯಲ್ಲಿ ಆದ ಬದಲಾವಣೆ ಏನು?
ಹೋರಾಟದ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ನೇಹಾರವರ ತಾಯಿ, ಹೋರಾಟದ ಯಶಸ್ಸಿನ ಬಳಿಕ ಅಭಿನಂದಿಸಿದ್ದು, ಇದು ದೇಶಾದ್ಯಂತ ಪೋಷಕರ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ನೇಹಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಅಂಕಿಅಂಶಗಳು
23 ದಿನಗಳುಉಪವಾಸ ಸತ್ಯಾಗ್ರಹದ ಅವಧಿ600ಕ್ಕೂ ಹೆಚ್ಚುಪ್ರತಿಭಟನೆ ವೇಳೆ ಬಂಧಿತರಾದ ವಿದ್ಯಾರ್ಥಿಗಳ ಸಂಖ್ಯೆ29ನೇಹಾ ಬೋರಾ ಅವರ ವಯಸ್ಸುಜುಲೈ 20ಪ್ರತಿಭಟನೆ ನಡೆದ ದಿನಾಂಕ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
'ಪಿಟಿಐ' ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೇಹಾ ಬೋರಾ, ಜುಲೈ 20ರಂದು ಜಂತರ್ ಮಂತರ್ನಲ್ಲಿ ನಡೆದ ಪೋಲಿಸ್ ಬಲಪ್ರಯೋಗ ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಭೀಕರ ಚಿತ್ರಣವನ್ನು ನೆನಪಿಸಿಕೊಂಡಿದ್ದಾರೆ.
ದೇಹವಿನ್ನೂ ಚೇತರಿಸಿಕೊಳ್ಳಬೇಕಿದೆ:
23 ದಿನಗಳ ಉಪವಾಸ ಸತ್ಯಾಗ್ರಹದಿಂದಾಗಿ ನನ್ನ ದೇಹ ಆಹಾರವಿಲ್ಲದೆ ಬದುಕಲು ಹೊಂದಿಕೊಂಡಿತ್ತು. ಈಗ ತಿನ್ನಲು ಶುರು ಮಾಡಿದರೂ ನನ್ನ ಜೀರ್ಣಾಂಗ ವ್ಯವಸ್ಥೆ ಇನ್ನೂ ಆಹಾರಕ್ಕೆ ಒಗ್ಗಿಕೊಂಡಿಲ್ಲ. ಸದ್ಯ ಖಾರ ಮತ್ತು ಮಾಂಸ ಸೇವನೆಯನ್ನು ಸಂಪೂರ್ಣವಾಗಿ ತೊರೆದಿದ್ದೇನೆ. ನಿಧಾನವಾಗಿ ದೇಹ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳ ಬಿಡುಗಡೆಗೆ ಸತತ ಯತ್ನ:
ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಕ್ತಾಯಗೊಂಡ ತಕ್ಷಣವೇ ಬಿಹಾರಕ್ಕೆ ತೆರಳಿದೆ. ಅಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಕೆಲವರ ಮೇಲೆ ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿತ್ತು. ನಾವು ಪಟ್ನಾ ಮತ್ತು ಸಿವಾನ್ಗೆ ತೆರಳಿ ಡಿಜಿಪಿಯವರನ್ನು ಭೇಟಿಯಾದ ನಂತರವೇ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ವಿವರಿಸಿದ್ದಾರೆ.
ಮುಂದುವರಿದು, ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ನಾನು ವಿಶ್ರಾಂತಿಯಲ್ಲಿದೆ. ಟೆಂಟ್ನಲ್ಲಿ ವೈದ್ಯರೊಂದಿಗೆ ಕುಳಿತಿದ್ದಾಗ ಅಶ್ರುವಾಯು ಸಿಡಿದ ಶಬ್ದ ಕೇಳಿಸಿತು. ಪೊಲೀಸರ ಲಾಠಿ ಚಾರ್ಜ್ ಮತ್ತು ಅಶ್ರುವಾಯು ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಗಳು ಶಿಬಿರಕ್ಕೆ ಮರಳಿದಾಗ ಅವರ ಗಾಯಗಳನ್ನು ನೋಡಿ ನಮಗೆ ಆಘಾತವಾಯಿತು. ಅಂಬುಲೆನ್ಸ್ ಸಿಗದೆ ಮುರಿದ ಕೈಗೆ ರಟ್ಟಿನ ಪಟ್ಟಿಯನ್ನು ಕಟ್ಟಿ ಚಿಕಿತ್ಸೆ ನೀಡಿದೆವು. ಮತ್ತೊಬ್ಬ ವಿದ್ಯಾರ್ಥಿಯ ಕುತ್ತಿಗೆಗೆ ಲಾಠಿಯಿಂದ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಮಹಿಳಾ ಪ್ರತಿಭಟನಾಕಾರರ ಮೇಲೆಯೂ ದೌರ್ಜನ್ಯ ಎಸಗಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಪೆಲೆಟ್ ಗನ್ ದಾಳಿ, ಕಾಲ್ತುಳಿತ
ಬ್ಯಾರಿಕೇಡ್ಗಳ ಮಧ್ಯೆ ಸಿಲುಕಿದ ಪ್ರತಿಭಟನಾಕಾರರ ಮೇಲೆ ಒಂದೆಡೆ ಲಾಠಿಚಾರ್ಜ್, ಇನ್ನೊಂದೆಡೆ ಅಶ್ರುವಾಯು ಪ್ರಯೋಗಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಪೆಲೆಟ್ ಗನ್ ದಾಳಿಯಿಂದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ವೆಂಟಿಲೇಟರ್ನಲ್ಲಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ.
ಬದಲಾದ ಕುಟುಂಬಸ್ಥರ ಮನಸ್ಥಿತಿ:
ನಮ್ಮ ಶರೀರದ ಮೇಲಿರುವ ಈ ಗಾಯದ ಗುರುತುಗಳೇ ಮುಂದಿನ ಪೀಳಿಗೆಗೆ ಸಾಕ್ಷಿಯಾಗಲಿವೆ ಎಂದ ನೇಹಾ, ಈ ಚಳವಳಿಯು ತಮ್ಮ ಕುಟುಂಬದಲ್ಲೂ ದೊಡ್ಡ ಬದಲಾವಣೆ ತಂದಿದೆ ಎಂದಿದ್ದಾರೆ. ಆರಂಭದಲ್ಲಿ ತಮ್ಮ ರಾಜಕೀಯ ಹೋರಾಟವನ್ನು ವಿರೋಧಿಸುತ್ತಿದ್ದ ನನ್ನ ತಾಯಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಫೋನ್ ಮಾಡಿ ಅಭಿನಂದಿಸಿದರು. ದೇಶದಾದ್ಯಂತ ಪೋಷಕರಲ್ಲಿ ಮೂಡಿದ ಈ ಜಾಗೃತಿ ಮತ್ತು ಬದಲಾವಣೆ ನನ್ನ ಪಾಲಿಗೆ ವೈಯಕ್ತಿಕ ಗೆಲುವು ಎಂದು ನೇಹಾ ಅಭಿಪ್ರಾಯಪಟ್ಟಿದ್ದಾರೆ.
ಯಾರಿದು ನೇಹಾ ಬೋರಾ
ಜಂತರ್ ಮಂತರ್ನಲ್ಲಿ ಪರಿಸರವಾದಿ ಸೊನಮ್ ವಾಂಗ್ಚೂಕ್ ಅವರ ರೀತಿಯಲ್ಲೇ 23 ದಿನಗಳವರೆಗೆ ಉಪವಾಸ ಸತ್ಯಾಗ್ರಹ ನಡೆಸಿ ಸುದ್ದಿಯಾದವರು ನೇಹಾ ಬೋರಾ. 29 ವರ್ಷ ವಯಸ್ಸಿನ ನೇಹಾ, ವಿದ್ಯಾರ್ಥಿಗಳ ಹಕ್ಕುಗಳ ಹೋರಾಟಗಾರ್ತಿ. ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟದ (ಎಐಎಸ್ಎ) ಅಧ್ಯಕ್ಷೆ. ಪ್ರಸ್ತುತ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಆಯಂಡ್ ಈಸ್ತೆಟಿಕ್ಸ್ನಲ್ಲಿ ಪಿ.ಎಚ್ಡಿ ಮಾಡುತ್ತಿದ್ದಾರೆ.
ಉತ್ತರಾಖಂಡದಲ್ಲಿ ಜನಿಸಿ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬೆಳೆದ ಅವರು ಉನ್ನತ ವ್ಯಾಸಂಗ ಮಾಡಲು ದೆಹಲಿಗೆ ಬಂದರು. ನಂತರ ಅದುವೇ ಅವರ ಹೋರಾಟದ ಕಾರ್ಯಕ್ಷೇತ್ರವಾಯಿತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೆದ ಅವರು, ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದರು.
ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ದನಿ
ವಿದ್ಯಾರ್ಥಿ ನಾಯಕಿಯಾಗಿ ಮಾತ್ರವಲ್ಲದೇ, ಸಾಮಾಜಿಕ ವಿಷಯಗಳ ಅಧ್ಯಯನಕಾರ್ತಿಯಾಗಿ, ರಂಗಭೂಮಿ ಕಲಾವಿದೆಯಾಗಿಯೂ ನೇಹಾ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿ ಜೀವನದುದ್ದಕ್ಕೂ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದ ಹೆಗ್ಗಳಿಕೆ ಅವರದ್ದು. ಮಹಿಳೆಯರ ಸುರಕ್ಷತೆ, ದಲಿತ, ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. ಶಿಕ್ಷಣದ ಖಾಸಗೀಕರಣ ವಿರೋಧಿ ಹೋರಾಟದಲ್ಲೂ ತೊಡಗಿಕೊಂಡಿದ್ದಾರೆ.
ಸಿಜೆಪಿಯೊಂದಿಗೆ ನೇರವಾಗಿ ಗುರುತಿಸಿಕೊಳ್ಳದೇ ಇದ್ದರೂ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಡೆದ ಈ ಐತಿಹಾಸಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅದು ಯಶಸ್ಸು ಗಳಿಸಿರುವುದರಲ್ಲಿ ನೇಹಾ ಬೋರಾ ಅವರ ಕೊಡುಗೆಯೂ ಸಾಕಷ್ಟಿದೆ.

