ನವದೆಹಲಿ: ಪರ-ವಿರೋಧ ಹೇಳಿಕೆಗಳ ನಡುವೆ ಕೃತಿ ಸನೋನ್ ನಟಿಸಿರುವ ರಕ್ಷಾಬಂಧನದ ಜಾಹೀರಾತನ್ನು ಹಿಂತೆಗೆದುಕೊಂಡಿರುವುದಾಗಿ ಆಭರಣ ಬ್ರ್ಯಾಂಡ್ GIVA ಹೇಳಿದೆ. ಈ ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ ಉಡುಪು ಮತ್ತು ತಮ್ಮ ನಾಯಿಗೆ ರಾಖಿ ಕಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ವಿವಾದದ ಕೆಲವು ದಿನಗಳ ನಂತರ ಇದೀಗ GIVA ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಸ್ಪಷ್ಟನೆ ನೀಡಿದ್ದು, "ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಮೇಲಿನ ಗೌರವದಿಂದ" ಜಾಹೀರಾತನ್ನು ಮಾಧ್ಯಮಗಳಿಂದ ಹಿಂತೆಗೆದುಕೊಂಡಿರುವುದಾಗಿ ಹೇಳಿದೆ.
"ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ನಮಗೆ ಅತ್ಯುನ್ನತ ಆದರ ಮತ್ತು ಆಳವಾದ ಗೌರವವಿದೆ. ಒಂದು ಬ್ರ್ಯಾಂಡ್ ಆಗಿ ನಾವು ಸದಾ ಈ ಸಂತೋಷದ ಕ್ಷಣಗಳನ್ನು ಇಡೀ ಕುಟುಂಬದ ಜೊತೆಗೆ ಆಚರಿಸುವಲ್ಲಿ ವಿಶ್ವಾಸವಿಟ್ಟಿದ್ದೇವೆ. ಈ ಬಾರಿ ನಾವು ನಮ್ಮ ಸಾಕು ಪ್ರಾಣಿಗಳಿಗೂ ಪ್ರೀತಿ ಮತ್ತು ಆಚರಣೆಯನ್ನು ವಿಸ್ತರಿಸಲು ಬಯಸಿದ್ದೇವೆ. ಆದರೆ ಪ್ರಮಾದವಶಾತ್ ನಮ್ಮ ಜಾಹೀರಾತು ಸಮಾಜದ ಕೆಲವು ಭಾಗಗಳ ಭಾವನೆಗಳಿಗೆ ನೋವುಂಟುಮಾಡಿದ್ದರೆ ಅದು ನಮ್ಮ ಉದ್ದೇಶವಾಗಿರಲಿಲ್ಲ. ಗೌರವದಿಂದ ಎಲ್ಲಾ ಮಾಧ್ಯಮಗಳಿಂದ ಸಂಬಂಧಿತ ಜಾಹೀರಾತನ್ನು ಹಿಂತೆಗೆದುಕೊಂಡಿದ್ದೇವೆ. ಈ ಹಬ್ಬದ ಋತುವಿನಲ್ಲಿ ನಿಮ್ಮೆಲ್ಲರ ಪ್ರೀತಿ ಮತ್ತು ಧನಾತ್ಮಕತೆಗೆ ಹಾರೈಸುತ್ತೇವೆ" ಎಂದು ಬ್ರ್ಯಾಂಡ್ ಹೇಳಿಕೆಯಲ್ಲಿ ತಿಳಿಸಿದೆ.
ಬಾಲಿವುಡ್ ನಟಿ ಕೃತಿ ಸನೋನ್ ಕಾಣಿಸಿಕೊಂಡಿರುವ ರಕ್ಷಾ ಬಂಧನದ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದು GIVA ಆಭರಣ ಬ್ರ್ಯಾಂಡ್ ನ ಜಾಹೀರಾತಾಗಿದೆ. ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ನಟಿ ಧರಿಸಿರುವ ಉಡುಪು ಮತ್ತು ಶೈಲಿಯ ಬಗ್ಗೆ ಆನ್ಲೈನ್ ನಲ್ಲಿ ತೀವ್ರ ಚರ್ಚೆಗಳಾಗಿದ್ದವು. ಈ ಜಾಹೀರಾತಿನಲ್ಲಿ ಕೃತಿ ಸನೋನ್ ಬಿಳಿ ಬಣ್ಣದ 'ಬ್ರಾಲೆಟ್' 'ಡೀಪ್ ವಿ-ನೆಕ್'ಶೈಲಿಯ ಬ್ಲೌಸ್ ಮತ್ತು ಸ್ಕರ್ಟ್ ಧರಿಸಿದ್ದರು. ಆಭರಣ ಬ್ರ್ಯಾಂಡ್ನ ಈ ಪ್ರಚಾರಾಭಿಯಾನದಲ್ಲಿ ಕೃತಿ ಸನೋನ್ ಅವರು ರಕ್ಷಾ ಬಂಧನವನ್ನು ಆಚರಿಸುತ್ತಿರುವುದನ್ನು ಕಾಣಬಹುದು. ರಕ್ಷಾ ಬಂಧನದಂತಹ ಸಾಂಪ್ರದಾಯಿಕ ಹಬ್ಬದ ಜಾಹೀರಾತಿಗಾಗಿ ಇಂತಹ ಉಡುಪನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ಪ್ರಚಾರಾಭಿಯಾನದ ಒಟ್ಟಾರೆ ಪರಿಕಲ್ಪನೆಯ ಬಗ್ಗೆಯೂ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೃತಿ ಸನೋನ್ ತಮ್ಮ ಉಡುಪು ಮತ್ತು ನಟನೆಯನ್ನು ಸಮರ್ಥಿಸಿಕೊಂಡಿದ್ದರು.
"ಹಬ್ಬಗಳ ಸಾರವು ನೀವು ಧರಿಸುವ ಬಟ್ಟೆಗಳಲ್ಲಿಲ್ಲ. ಅದು ಭಾವನೆಗಳು ಮತ್ತು ಸಂಪ್ರದಾಯಗಳನ್ನು ನೀವು ಅರ್ಥೈಸಿಕೊಳ್ಳುವ ರೀತಿಯಲ್ಲಿದೆ" ಎಂದು ಅವರು ಬರೆದಿದ್ದಾರೆ. "ಮಹಿಳೆಯರ ಉಡುಗೆ ನಿರಂತರವಾಗಿ ಏಕೆ ಸಾಮಾಜಿಕ ಪರಿಶೀಲನೆಗೆ ಒಳಗಾಗುತ್ತದೆ? ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಭಾರತೀಯ ಫ್ಯಾಷನ್ ಬಹಳ ಬೆಳೆದಿದೆ. ಆದರೆ ಇಂದಿಗೂ ಮಹಿಳೆಗೆ ಗೌರವ ಮತ್ತು ಆಕೆಯ ಸಂಸ್ಕೃತಿಯನ್ನು ಬಟ್ಟೆಗಳಲ್ಲಿ ಅಳೆಯಲಾಗುತ್ತಿದೆ!! ಸಂಸ್ಕೃತಿ ಮತ್ತು ಸಂಪ್ರದಾಯಗಳು ಆಕೆಯ ಹೃದಯದಲ್ಲಿರುತ್ತದೆಯೇ ವಿನಾ ನೆಕ್ಲೈನ್ಗಳಲ್ಲಿ ಅಲ್ಲ!" ಎಂದು ಕೃತಿ ಸನೋನ್ ಬರೆದಿದ್ದರು.
ನಾಯಿಗೆ ರಾಖಿ ಕಟ್ಟುವುದನ್ನೂ ಅವರು ವಿವರಿಸಿದ್ದರು. "ರಕ್ಷಾಬಂಧನವು ರಕ್ಷಣೆಯ ಬಂಧವಾಗಿದೆ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟುತ್ತೇವೆ. ಒಬ್ಬ ಸಹೋದರನಿಗಿಂತ ಕಡಿಮೆಯಿಲ್ಲದೆ ನಾವು ಪರಸ್ಪರ ರಕ್ಷಿಸಿಕೊಳ್ಳಬಹುದು ಎಂದು ನಮಗೆ ತಿಳಿದಿದೆ. ನಾವು ಪರಸ್ಪರರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮಗಾಗಿ, ಈ ಪ್ರಾರ್ಥನೆ ಮತ್ತು ಭರವಸೆ ನಮ್ಮ ನಾಯಿಗಳಿಗೂ ವಿಸ್ತರಿಸುತ್ತದೆ, ಏಕೆಂದರೆ ಅವೂ ನಮ್ಮ ಕುಟುಂಬ" ಎಂದು ಅವರು ಹೇಳಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರೂ ಕೃತಿ ಸನೋನ್ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದರು.

