ನವದೆಹಲಿ: 'ಆಪರೇಷನ್ ಸಿಂಧೂರ' ಸೇನಾ ಕಾರ್ಯಾಚರಣೆ ವೇಳೆ ಭಾರತವು ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಪರಮಾಣು ನೆಲೆ ಮೇಲೆ ದಾಳಿ ಮಾಡಿತ್ತು ಎಂಬ ವದಂತಿಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿರುವ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಷನ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಅವರು, ಭಾರತೀಯ ಸೇನೆಯು ಪಾಕ್ನ ಪರಮಾಣು ನೆಲೆ ಮೇಲೆ ದಾಳಿ ಮಾಡಿರಲಿಲ್ಲ. ಆದರೆ, ಒಂದು ಶಸ್ತ್ರಾಸ್ತ್ರ ಆ ಬೆಟ್ಟಕ್ಕೆ ಅಪ್ಪಳಿಸಿತ್ತು ಎಂದು ಹೇಳಿದ್ದಾರೆ.
'ನಾವು ಸರ್ಗೋಧಾ (ಪಂಜಾಬ್ ಪ್ರಾಂತ್ಯದಲ್ಲಿರುವ ನಗರ) ಕಡೆಗೆ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹಾರಿಸಿದ್ದೆವು. ಅವುಗಳಲ್ಲಿ ಒಂದು ಕಿರಾನಾ ಬೆಟ್ಟಕ್ಕೆ ಅಪ್ಪಳಿಸಿರಬೇಕು. ಸರ್ಗೋಧಾದಿಂದ ಸುಮಾರು 10 ಕಿ.ಮೀ. ಉತ್ತರಕ್ಕೆ ಕಿರಾನಾ ಬೆಟ್ಟವಿದೆ' ಎಂದು ಹೇಳಿದ್ದಾರೆ.
'ಬೆಟ್ಟದಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಪಾಕಿಸ್ತಾನಿ ಮಾಧ್ಯಮಗಳು, ಕೆಲವು ಚಿತ್ರಗಳನ್ನು ಪ್ರಸಾರ ಮಾಡಿದ್ದವು. ಅದಕ್ಕೆ ತಕ್ಕಂತೆ, ಕಿರಾನಾ ಬೆಟ್ಟದ ಮೇಲಿನ ದಾಳಿಗೆ ಕಾರಣ ಏನಿರಬಹುದು ಎಂಬ ಪ್ರಶ್ನೆಗಳು ಎದ್ದಿದ್ದವು' ಎಂದಿದ್ದಾರೆ.
ಕಳೆದ ತಿಂಗಳು ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗೋಷ್ಠಿ ನಡೆಸಿದ್ದ ಅಂದಿನ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಕಿರಾನಾ ಬೆಟ್ಟದ ಮೇಲೆ ದಾಳಿ ಮಾಡಲಾಗಿದೆ ಎಂಬುದನ್ನು ಅಲ್ಲಗಳೆದಿದ್ದರು.
ಇದೀಗ ಚೌಹಾಣ್ ಅವರೂ, 'ಕಿರಾನಾ ಬೆಟ್ಟವು ಭಾರತೀಯ ಸೇನಾ ಪಡೆಗಳ ಗುರಿ ಆಗಿರಲಿಲ್ಲ. ಅಲ್ಲಿ ಸ್ಫೋಟ ಸಂಭವಿಸಿದ್ದು ಉದ್ದೇಶಪೂರ್ವಕವಾದ ದಾಳಿಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪಾಕಿಸ್ತಾನದಲ್ಲಿರುವ ಸ್ಕರ್ದು ನಗರದ ಮೇಲೆ ದಾಳಿ ಮಾಡಲು ಅನುಮತಿ ದೊರೆತಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಗುರಿಯನ್ನು ಭೋಲಾರಿಯಲ್ಲಿರುವ ಪಿಎಎಫ್ ನೆಲೆಯತ್ತ ಬದಲಿಸಿಕೊಳ್ಳಲಾಗಿತ್ತು ಎಂದೂ ವಿವರಿಸಿದ್ದಾರೆ.
ಕಿರಾನಾ ಬೆಟ್ಟದ ಪ್ರದೇಶದಲ್ಲಿನ ಸ್ಫೋಟ ಹಾಗೂ ಹೊಗೆ ಬರುತ್ತಿರುವ ವಿಡಿಯೊಗಳನ್ನು ಪಾಕಿಸ್ತಾನ ಮಾಧ್ಯಮಗಳು ಹಂಚಿಕೊಂಡಿದ್ದವು. ಆ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡಿದ್ದವು. ಹೀಗಾಗಿ, ಭಾರತವು ಸೂಕ್ಷ್ಮ ಪ್ರದೇಶದ ಮೇಲೆ ದಾಳಿ ಮಾಡಿದೆ ಎಂಬ ವದಂತಿ ಹರಡಿತ್ತು. ಅದನ್ನೆಲ್ಲ ಭಾರತ ಅಲ್ಲಗಳೆದಿತ್ತು.

