ನವದೆಹಲಿ: ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ರೂಪದರ್ಶಿ ಸೇರಿದಂತೆ ಯುಟ್ಯೂಬರ್ನನ್ನು ಹತ್ಯೆ ಮಾಡಲಾಗಿದೆ.
ಬುಧವಾರ ಸಂಜೆ ಈ ಎರಡು ಹತ್ಯೆಗಳು ನಡೆದಿವೆ ಎಂದು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ತಿಲಕ್ ನಗರದಲ್ಲಿ ರೂಪದರ್ಶಿ ಮುಸ್ಕಾನ್ (21) ಎಂಬ ಯುವತಿಯನ್ನು ಅವರ ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ.
ಮನೆಯಲ್ಲಿ ಈಕೆ ಒಬ್ಬಳೇ ಇದ್ದಾಗ ದಾಳಿ ನಡೆಸಿದ ಜಿಮ್ ಟ್ರೇನರ್ ಇಮ್ರಾನ್, ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಯುವತಿಯ ಚೀರಾಟ ಕೇಳಿ ಧಾವಿಸಿದ ನೆರೆಹೊರೆಯವರು ತಕ್ಷಣ ಆಸ್ಪತ್ರೆಗೆ ಸೇರಿಸಿದರಾದರೂ ಮುಸ್ಕಾನ್ ಬದುಕಲಿಲ್ಲ.
ಆರೋಪಿಯ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರೆದಿದೆ ಎಂದು ಹೆಚ್ಚುವರಿ ಡಿಸಿಪಿ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ.
ಮತ್ತೊಂದೆಡೆ, ಉತ್ತರ ಪ್ರದೇಶದ ಶ್ಯಾಮ್ಲಿ ಜಿಲ್ಲೆಯಲ್ಲಿ ಗಾಯಕ ಹಾಗೂ ಯೂಟ್ಯೂಬರ್ ಅಂಕಿತ್ ಬಾಲ್ಯಾನ್ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಧವಾರ ಸಂಜೆ ಜಿಮ್ನಿಂದ ಹೊರಬರುತ್ತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮುಂಬರುವ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಬಾಲ್ಯಾನ್ ಮುಂದಾಗಿದ್ದರು. ಇವರ ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಲ್ಯಾನ್ ಹತ್ಯೆಯನ್ನು ಖಂಡಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ್ದಾರೆ.

