ಮುಜಫರ್ನಗರ: ಬುರ್ಖಾ ಧರಿಸಿದ್ದ ಇಬ್ಬರು ಮುಸ್ಲಿಂ ಮಹಿಳೆಯರು ಬಲಪಂಥೀಯ ಸಂಘಟನೆಯ ಕಾರ್ಯಕರ್ತರೊಂದಿಗೆ 'ಕಾವಡ್ ಯಾತ್ರೆ'ಯಲ್ಲಿ ಭಾಗವಹಿಸಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ನಿವಾಸಿಗಳಾದ ತಮನ್ನಾ ಮಲ್ಲಿಕ್ ಮತ್ತು ಅನಿಶಾ ಬಾನು ಎಂಬ ಇಬ್ಬರು ಮಹಿಳೆಯರು, 'ಕಾವಡ್' (ಗಂಗಾ ಜಲ) ಹೊತ್ತು ಉತ್ತರ ಪ್ರದೇಶದ ಮುಜಫರ್ನಗರಕ್ಕೆ ತಲುಪಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಈ ಯಾತ್ರೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಕ್ರಮವನ್ನು ಕೆಲವು ಹಿಂದೂ ಸಂಘಟನೆಗಳು ಶ್ಲಾಘಿಸಿದ್ದರೆ, ಇನ್ನು ಕೆಲವು ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.
ಹರಿದ್ವಾರದಿಂದ ಗಂಗಾಜಲವನ್ನು ತರುತ್ತಿರುವ ಈ ಮಹಿಳೆಯರು, ಆಗಸ್ಟ್ 11 ರಂದು ಗಾಜಿಯಾಬಾದ್ನ ದಸ್ನಾ ಶಿವ ದೇವಾಲಯವನ್ನು ತಲುಪಲಿದ್ದು, ಅಲ್ಲಿ ಶಿವನಿಗೆ 'ಜಲಾಭಿಷೇಕ' ನೆರವೇರಿಸಲಿದ್ದಾರೆ. ಈ ಇಬ್ಬರು ಮಹಿಳೆಯರೊಂದಿಗೆ 'ಹಿಂದೂ ರಕ್ಷಾ ದಳ'ದ ಕಾರ್ಯಕರ್ತರು ಕೂಡ ಪ್ರಯಾಣಿಸುತ್ತಿದ್ದಾರೆ.
ಇವರು ಮುಜಫರ್ನಗರ ತಲುಪಿದಾಗ 'ಹಿಂದೂ ಸಂಘರ್ಷ ಸಮಿತಿ'ಯ ಕಾರ್ಯಕರ್ತರು ಅವರ ಮೇಲೆ ಹೂಮಳೆ ಸುರಿಸಿ ಸ್ವಾಗತಿಸಿದರು.
ಬಲಪಂಥೀಯ ನಾಯಕ, ಯೋಗ ಸಾಧನಾ ಆಶ್ರಮದ ಸ್ವಾಮಿ ಯಶ್ವೀರ್ ಅವರು, ಮಹಿಳೆಯರು ಕೈಗೊಂಡ ಯಾತ್ರೆಯನ್ನು ವಿರೋಧಿಸಿದ್ದಾರೆ. ಬುರ್ಖಾ ಧರಿಸಿದವರಿಗೆ ಕಾವಡ್ ಯಾತ್ರೆಯಲ್ಲಿ ಅವಕಾಶ ನೀಡಬಾರದು. ಅವರು ಸಾಂಪ್ರದಾಯಿಕ 'ಕಂವಾರಿಯ' ಉಡುಪಿನಲ್ಲಿಯೇ ಯಾತ್ರೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಜುಲೈ 30 ರಂದು ಪ್ರಾರಂಭವಾದ ಕಾವಡ್ ಯಾತ್ರೆ ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ.

