ಕಾಸರಗೋಡು: ಜಿಲ್ಲೆಯ ಎಂಡೋ ಸಂತ್ರಸ್ತರಿಗೆ ನೀಡಲಾಗಿರುವ ಭರವಸೆಗಳನ್ನು ಕಾಲವಿಳಂಬವಿಲ್ಲದೆ ಈಡೇರಿಸಲಾಗುವುದು ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ಅಳಲು ಆಲಿಸಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.
ಅವರು ತಿರುವನಂತಪುರದಲ್ಲಿ ತಮ್ಮನ್ನು ಭೇಟಿಯಾದ ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರ ಸಮಿತಿ ಪದಾಧಿಕಾರಿಗಳಿಗೆ ಈ ಭರವಸೆ ನೀಡಿದ್ದಾರೆ.
ಉಚಿತ ಔಷಧ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಈಗಾಘಲೇ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ ತಿಂಗಳಿಂದ ಸ್ಥಗಿತಗೊಂಡಿದ್ದ ಪಿಂಚಣಿ ವಿತರಣೆಯನ್ನು ಪುನರಾರಂಭಿಸಲಾಗುವುದು ಮತ್ತು ಓಣಂ ಹಬ್ಬಕ್ಕೂ ಮೊದಲಾಗಿ ಎಲ್ಲರಿಗೂ ಪಿಂಚಣಿ ಕೈಸೇರುವಂತೆ ಮಾಡಲಾಗುವುದು. ಸ್ಥಗಿತಗೊಂಡಿದ್ದ ವಿಶೇಷ ಚಿಕಿತ್ಸಾ ಸೌಕರ್ಯ ಮುಂದುವರಿಸಲಾಗುವುದು. ಮಂಗಳೂರಿನ ಪ್ರಮುಖ ವೈದ್ಯಕೀಯ ಆಸ್ಪತ್ರೆಗಳಲ್ಲಿ ಸ್ಥಗಿತಗೊಂಡಿರುವ ಎಂಡೋ ಸಂತ್ರಸ್ತರ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪುನಃಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಎಂಡೋ ಸಮಿತಿ ಸಭೆಗಳ ಪ್ರಕ್ರಿಯೆಗಳನ್ನು ಶೀಘ್ರ ಪ್ರಾರಂಭಿಸಲಾಗುವುದು ಮತ್ತು ಮೊದಲ ಸಭೆಯಲ್ಲಿ ತಾವೇ ಖುದ್ದಾಗಿ ಭಾಗವಹಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸಂದರ್ಭ ನಿಯೋಗ ಮುಖ್ಯಮಂತ್ರಿಗೆ ಎಂಡೋಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿತು. ನಿಯೋಗದಲ್ಲಿ ಅಂಬಲತ್ತರ ಕುಞÂಕೃಷ್ಣನ್, ಬಿ. ಶಿವಕುಮಾರ್, ಮಿಸ್ರಿಯಾ ಚೆಂಗಳ ಮತ್ತು ಪಿ. ಶೈನಿ ಭಾಗವಹಿಸಿದ್ದರು.



