ಮುಂಬೈ: ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ನೇತೃತ್ವದ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ ಬಾಂಬೆ ಹೈಕೋರ್ಟ್ ಛೀಮಾರಿ ಹಾಕಿದೆ.
ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧ ವರ್ತನೆ ಮತ್ತು ಪ್ರಾಯೋಗಿಕ ದೃಷ್ಟಿಕೋನದ ಬದಲಿಗೆ ಕೇವಲ ನಿಯಮಗಳ ಅಕ್ಷರಶಃ ಪಾಲನೆಯಸಂಕುಚಿತ ದೃಷ್ಟಿಕೋನ ಹೊಂದಿದ್ದೀರಿ ಎಂದು ನ್ಯಾಯಾಲಯವು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಸಿಟ್ಟಿಗೆ ಮಣಿದ ಎಫ್ಡಿಎ ತನ್ನ ಎರಡು ಆದೇಶಗಳನ್ನು ಹಿಂತೆಗೆದುಕೊಂಡಿದೆ.
ಕಾನೂನನ್ನು ಸೂಕ್ತವಾಗಿ ಪರಿಶೀಲಿಸದೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆವರಣದಲ್ಲಿರುವ ಉಪಹಾರ ಗೃಹಗಳ ಕಾರ್ಯಾಚರಣೆ ಅಮಾನತು ಆದೇಶ ಹೊರಡಿಸಲಾಗಿದೆ. ಇದರಲ್ಲಿ ಅತಿಯಾದ ಆತುರ ತೋರಿರುವುದು ಕಂಡುಬಂದಿದೆ ಎಂದು ಎಫ್ಡಿಎ ಅನ್ನು ತರಾಟೆಗೆ ತೆಗೆದುಕೊಂಡಿತು. ನಿಮ್ಮನ್ನು ನೀವು ಪ್ರಭುಗಳೆಂದು ಭಾವಿಸಿದ್ದೀರಾ? ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದೀರ ಎಂದು ಪ್ರಶ್ನಿಸಿತು.
ಸಂಸ್ಥೆಯು ತನ್ನ ಅಧಿಕಾರದ ವ್ಯಾಪ್ತಿ ಮೀರಿ ದರ್ಪ ತೋರಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಾದ್ ಅವರನ್ನೊಳಗೊಂಡ ಪೀಠ ಕಿಡಿಕಾರಿದೆ.
ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶಿಸುವುದಾಗಿ ಹೈಕೋರ್ಟ್ ಎಚ್ಚರಿಸಿದ ಬಳಿಕ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಎಂಸಿಎ ಆವರಣದ ಐದು ರೆಸ್ಟೊರೆಂಟ್ಗಳ ಕಾರ್ಯಾಚರಣೆ ಅಮಾನತು ಆದೇಶ ಹಿಂಪಡೆದಿರುವುದಾಗಿ ಎಫ್ಡಿಎ ಹೇಳಿದೆ. ಇದರ ಜೊತೆಗೆ, ಹೈಕೋರ್ಟ್ ತಪರಾಕಿಗೆ ಮಣಿದ ಎಫ್ಡಿಎ, ಪುಣೆಯ 'ಸಿಪ್ಲಾ ಫಾರ್ಮಾ ಮತ್ತು ಲೈಫ್ ಸೈನ್ಸಸ್ ಲಿಮಿಟೆಡ್' ಘಟಕದ ಔಷಧ ಮಾರಾಟ ಪರವಾನಗಿ ರದ್ದು ಆದೇಶವನ್ನೂ ಹಿಂಪಡೆದಿದೆ.
ಇತ್ತೀಚಿನ ತಪಾಸಣೆಯ ವೇಳೆ ಈ ರೆಸ್ಟೊರೆಂಟ್ಗಳು ಶೇ 88ರಷ್ಟು ಆಹಾರ ಸುರಕ್ಷತಾ ನಿಯಮಗಳ ಪಾಲನೆ ಮಾಡಿರುವುದು ಕಂಡುಬಂದಿದೆ ಎಂದು ನ್ಯಾಯಪೀಠ ಹೇಳಿದೆ.

