ನವದೆಹಲಿ: ಕಾಕ್ರೋಚ್ ಜನತಾ ಪಕ್ಷ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್ರಾವ್ ದೀಪ್ಕೆ ಅವರ ಆದಾಯ ಮತ್ತು ಆಸ್ತಿ ಕುರಿತು ತನಿಖೆ ನಡೆಸುವಂತೆ ಸೂರತ್ ಮೂಲದ RTI ಕಾರ್ಯಕರ್ತ ಅಮಿತ್ ತಿವಾರಿ ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿ ಸಂಸ್ಥೆ PTI ವರದಿ ಪ್ರಕಾರ, ಮಹಾರಾಷ್ಟ್ರ ಸರಕಾರದ ನಿವೃತ್ತ ಉದ್ಯೋಗಿಯಾಗಿರುವ ಭಗವಾನ್ರಾವ್ ದೀಪ್ಕೆ ಅವರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC)ದಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.
ಅವರಿಗೆ ತಿಂಗಳಿಗೆ ಸುಮಾರು 60 ಸಾವಿರದಿಂದ 65 ಸಾವಿರ ರೂ. ಸಂಬಳ ದೊರೆಯುತ್ತಿತ್ತು. ಅಂತಹ ಆದಾಯದಲ್ಲಿ ಅಮೆರಿಕದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಕಲಿಸಲು ಬೇಕಾದ ವೆಚ್ಚವನ್ನು ಹೇಗೆ ಭರಿಸಿದರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ತಿವಾರಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಬೋಸ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಅಭಿಜೀತ್ ದೀಪ್ಕೆ ಅವರು, CJP ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಜೂನ್ 6ರಂದು ಭಾರತಕ್ಕೆ ಮರಳಿದ್ದರು.
"ಭಗವಾನ್ರಾವ್ ದೀಪ್ಕೆ ಅವರ ಆಸ್ತಿ ಮತ್ತು ಆದಾಯದ ಮೂಲವನ್ನು ಪರಿಶೀಲಿಸಬೇಕು. ಅಕ್ರಮ ಆಸ್ತಿ ಹೊಂದಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ" ಎಂದು ತಿವಾರಿ ಹೇಳಿದ್ದಾರೆ.
ಕಾನೂನು ನೆರವು ನಿಧಿಗೂ ತನಿಖೆ ಕೋರಿಕೆ
CJP ಪರವಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಘೋಷಿಸಿರುವ 1 ಕೋಟಿ ರೂಪಾಯಿ ಕಾನೂನು ನೆರವು ನಿಧಿಯ ಬಗ್ಗೆಯೂ ತಿವಾರಿ ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಅವರು ಭಾರತದ ಚುನಾವಣಾ ಆಯೋಗ ಮತ್ತು ಕೇಂದ್ರ ಜಿಎಸ್ಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
"CJP ನೋಂದಾಯಿತ ರಾಜಕೀಯ ಪಕ್ಷವಲ್ಲ. ಆದರೂ ರಾಜಕೀಯ ಪಕ್ಷದಂತೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ಜನತಾ ಪ್ರಾತಿನಿಧ್ಯ ಕಾಯ್ದೆ-1951ರ ಸೆಕ್ಷನ್ 29A ಅಡಿಯಲ್ಲಿ ಅದು ನೋಂದಾಯಿತವಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ ಪರಿಶೀಲಿಸಬೇಕು. ನೋಂದಾಯಿತವಾಗಿಲ್ಲದಿದ್ದರೆ, ಅದರ ಹೆಸರಿನಲ್ಲಿ ಸಂಗ್ರಹವಾಗುತ್ತಿರುವ ನಿಧಿಯ ಮೂಲ ಮತ್ತು ಹಣಕಾಸಿನ ವ್ಯವಹಾರಗಳ ತನಿಖೆ ನಡೆಸಬೇಕು" ಎಂದು ಅವರು PTIಗೆ ತಿಳಿಸಿದ್ದಾರೆ.
ಕಾನೂನು ನೆರವಿಗಾಗಿ ಘೋಷಿಸಿರುವ 1 ಕೋಟಿರೂ. ಗೆ ಅನ್ವಯವಾಗುವ ಶೇ.18ರಷ್ಟು ಜಿಎಸ್ಟಿಯನ್ನು ಯಾವ ರೀತಿಯಲ್ಲಿ ಪಾವತಿಸಲಾಗುವುದು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಪ್ರತಿಭಟನೆ ವಿರುದ್ಧ ಆಕ್ಷೇಪ
CJP ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಆರಂಭದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸೀಮಿತವಾಗಿದ್ದವು. ನಂತರ ಚಳವಳಿಯ ಸ್ವರೂಪ ಬದಲಾಗಿದೆ ಎಂದು ತಿವಾರಿ ಆರೋಪಿಸಿದ್ದಾರೆ.
"ನೀಟ್ ವಿರುದ್ಧ ಪ್ರತಿಭಟನೆ ನಡೆಸುವವರೆಗೆ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಯಿತು. ವಿದೇಶಿ ನಾಯಕರೊಂದಿಗಿನ ಅವರ ಸಂಬಂಧದ ಬಗ್ಗೆಯೂ ಅವಹೇಳನಕಾರಿ ರೀತಿಯಲ್ಲಿ ಮಾತನಾಡಲಾಯಿತು. ಈ ಎಲ್ಲದರ ವಿರುದ್ಧ ನಾವು ದೂರು ಸಲ್ಲಿಸಿದ್ದೇವೆ. ಇಂತಹ ನಡೆ ಸರಿಯಲ್ಲ" ಎಂದು ತಿವಾರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

