ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂದು ಬಿಂಬಿಸಿಕೊಂಡು 2017ರ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜಾಮೀನಿಗಾಗಿ ವಿಶೇಷ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ಹೇಳಿದೆ.
ಸುಕೇಶ್ ಕೃತ್ಯವು ನ್ಯಾಯಾಂಗ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಗೆ ಮಾಡಿದ ನೇರ ಅಪಮಾನ ಎಂದು ನ್ಯಾಯಾಲಯ ಹೇಳಿದೆ.
ಐಪಿಸಿ ಸೆಕ್ಷನ್ 170(ಸಾರ್ವಜನಿಕ ಸೇವಕನಂತೆ ನಟಿಸುವುದು), 189 (ಸಾರ್ವಜನಿಕ ಸೇವಕನಿಗೆ ಹಾನಿ ಉಂಟುಮಾಡುವ ಬೆದರಿಕೆ ಹಾಕುವುದು) ಮತ್ತು 507 (ಅನಾಮಧೇಯ ಸಂವಹನದ ಮೂಲಕ ಅಪರಾಧಪೂರಿತ ಬೆದರಿಕೆ) ಅಡಿ ಸುಕೇಶ್ ತಪ್ಪಿತಸ್ಥನೆಂದು ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಹರ್ಷಿತಾ ಮಿಶ್ರಾ ಆದೇಶ ನೀಡಿದ್ದಾರೆ.
ಆಗಸ್ಟ್ 27ರಂದು ಶಿಕ್ಷೆ ಪ್ರಮಾಣ ಕುರಿತಂತೆ ನ್ಯಾಯಾಲಯ, ವಾದ ಆಲಿಸಿ ಆದೇಶ ನೀಡಲಿದೆ.
2017ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋಗಿನಲ್ಲಿ ಕರೆ ಮಾಡಿರುವ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿದೆ.
ಕಾನ್ಸ್ಟೆಬಲ್ ಮಂಜೀತ್ ಮೊಬೈಲ್ ಫೋನ್ ಅನ್ನು ಪಡೆದಿದ್ದ ಸುಕೇಶ್, ಭ್ರಷ್ಟಾಚಾರ ನಿಗ್ರಹ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಧೀಶರಾದ ಪೂನಂ ಚೌಧರಿ ಅವರ ಅಧಿಕೃತ ಲ್ಯಾಂಡ್ಲೈನ್ ಸಂಖ್ಯೆ ಮತ್ತು ಮೊಬೈಲ್ ಫೋನ್ಗೆ ಕರೆ ಮಾಡಿದ್ದ. ಜಾಮೀನು ನೀಡುವಂತೆ ಪ್ರಭಾವ ಬೀರಲು ಯತ್ನಿಸಿದ್ದ ಎಂದು ವರದಿ ತಿಳಿಸಿದೆ.
ಸುಪ್ರೀಂ ಕೋರ್ಟ್ನ ಅಂದಿನ ನ್ಯಾಯಮೂರ್ತಿಯೊಬ್ಬರ ಖಾಸಗಿ ಕಾರ್ಯದರ್ಶಿ ಎಂದು ಮೊದಲಿಗೆ ಹೇಳಿಕೊಂಡಿದ್ದ ಸುಕೇಶ್, ಬಳಿಕ, ತಾನೇ ನ್ಯಾಯಮೂರ್ತಿ ಎಂದು ಹೇಳಿದ್ದ. ಭ್ರಷ್ಟಾಚಾರ ಪ್ರಕರಣದಲ್ಲಿ ಕೂಡಲೇ ಜಾಮೀನು ನೀಡಬೇಕು. ಇಲ್ಲದಿದ್ದರೆ, ವೃತ್ತಿಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.

