ನವದೆಹಲಿ: ದೆಹಲಿಯ ಛತ್ತರ್ಪುರದ ಸಂಜಯ್ ಕಾಲೊನಿಯ ಸರ್ಕಾರಿ ಶಾಲೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸೆಪ್ಟೆಂಬರ್ 15ರವರೆಗೆ ಗಡುವು ನೀಡಿದೆ.
ನಿಗದಿತ ಅವಧಿಯೊಳಗೆ ಶಾಲೆಯ ದುರಸ್ತಿ ಕಾರ್ಯ ಆರಂಭಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಎಚ್ಚರಿಕೆ ನೀಡಿದೆ.
ಸಿಜೆಪಿಯ ಸಹ ಸಂಚಾಲಕ ಸೌರವ್ ದಾಸ್ ಅವರು ಪಕ್ಷದ 'ಸ್ಕೂಲ್ ಠೀಕ್ ಕರೊ' ಅಭಿಯಾನದ ಭಾಗವಾಗಿ ಸಂಜಯ್ ಕಾಲೊನಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ವಿಡಿಯೊ ಹಂಚಿಕೊಂಡಿರುವ ಸಿಜೆಪಿ, ಶಾಲಾ ಆವರಣದಲ್ಲಿ ಕಸ ತುಂಬಿಕೊಂಡಿದ್ದು, ಮೂಲಸೌಕರ್ಯಗಳ ಕೊರತೆಯ ನಡುವೆಯೇ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಿದೆ ಎಂದು ಆರೋಪಿಸಿದೆ.
'ಫೆಬ್ರುವರಿಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸಂಜಯ್ ಕಾಲೊನಿಗೆ ಭೇಟಿ ನೀಡಿದ್ದು, ಶಾಲೆಯನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆರು ತಿಂಗಳ ಬಳಿಕವೂ ಶಾಲಾ ಮಕ್ಕಳನ್ನು ಕಸದ ರಾಶಿಯೇ ಸ್ವಾಗತಿಸುತ್ತಿದೆ' ಎಂದು ಸೌರವ್ ದಾಸ್ ಆರೋಪಿಸಿದ್ದಾರೆ.
ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ, ಕಳಪೆ ಆಹಾರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಅವರು ಹೇಳಿದ್ದಾರೆ.
'ಶಾಲೆಯನ್ನು ಸರಿಪಡಿಸದಿದ್ದರೆ ಮತ್ತೆ ಬೀದಿಗಿಳಿಯುತ್ತೇವೆ. ಸೆಪ್ಟೆಂಬರ್ 15ರೊಳಗೆ ದುರಸ್ತಿ ಕೆಲಸ ಪ್ರಾರಂಭಿಸಬೇಕು. ಉತ್ತಮ ಶಿಕ್ಷಣಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ' ಎಂದು ದಾಸ್ ಎಚ್ಚರಿಸಿದ್ದಾರೆ.
ಸಿಜೆಪಿ ಮಾಡಿರುವ ಆರೋಪಗಳಿಗೆ ದೆಹಲಿ ಸರ್ಕಾರ, ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ದೆಹಲಿ ಬಿಜೆಪಿ ಘಟಕದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

