ಲಖನೌ: ಉತ್ತರ ಪ್ರದೇಶದ 35 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. 16,784 ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 3,042 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಸಂಬಂಧಿತ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಪ್ರತಾಪಗಢದ 18 ತಿಂಗಳ ಮಗು ಪ್ರಿಯಾಂಶ್, ಅಮ್ರೋಹಾದ 32 ವರ್ಷದ ಶೇರಾ ಮತ್ತು 55 ವರ್ಷದ ಸುರೇಶ್ ಸಾವಿಗೀಡಾಗಿದ್ದಾರೆ.
ಸಮರೋಪಾದಿಯಲ್ಲಿ ಪರಿಹಾರ ಕಾರ್ಯ
1,499 ಬೋಟ್ ಮತ್ತು ಮೋಟಾರ್ ಬೋಟ್ಗಳನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 1,067 ವೈದ್ಯಕೀಯ ತಂಡಗಳನ್ನು ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಯೋಧ್ಯೆ, ಅಜಂಗಢ, ಬಲ್ಲಿಯಾ, ಬಾರಾಬಂಕಿ, ಬದೌನ್, ಚಂದೌಲಿ, ಫರೂಕಾಬಾದ್, ಗಾಜಿಪುರ, ಗೋರಖಪುರ, ಹರ್ದೋಯಿ, ಕಾಸ್ಗಂಜ್, ಲಖಿಂಪುರ ಖೇರಿ, ಮಿರ್ಜಾಪುರ, ಮೊರಾದಾಬಾದ್, ಪಿಲಿಭಿತ್, ಪ್ರಯಾಗರಾಜ್, ರಾಯ್ಬರೇಲಿ, ಸಂತ ಕಬೀರ್, ಉನ್ಕಬೀರ್, ಶಹಜಾನ್ಪುರ್ ನಗರ ಮತ್ತು ವಾರಾಣಸಿ ಪ್ರವಾಹ ಪೀಡಿತ ಜಿಲ್ಲೆಗಳಾಗಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಈ ಜಿಲ್ಲೆಗಳಲ್ಲಿ ಪ್ರವಾಹ ಸಂತ್ರಸ್ತರಿಗಾಗಿ 1,311 ಶಿಬಿರಗಳನ್ನು ಸ್ಥಾಪಿಸಸಲಾಗಿದ್ದು, ಆ ಪೈಕಿ 201 ಕೇಂದ್ರಗಳು ಕಾರ್ಯಾರಂಭ ಮಾಡಿವೆ.
ಮಂದಾಕಿನಿ ದಡದ ಗ್ರಾಮದಿಂದ 150 ಜನರ ರಕ್ಷಣೆ
ಮಂದಾಕಿನಿ ನದಿಯ ದಡದಲ್ಲಿರುವ ಚೌರಾ ಗ್ರಾಮದಿಂದ ಸುಮಾರು 150 ಜನರನ್ನು ರಕ್ಷಿಸಲಾಗಿದೆ. ಅವರಿಗೆ ಆಹಾರ, ತಾತ್ಕಾಲಿಕ ವಸತಿ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ.
ಗಂಗಾ ಮತ್ತು ಸರಯೂ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದ್ದು, ಬಲ್ಲಿಯಾದಲ್ಲಿ ಸುಮಾರು 20,500 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ 83 ಬೋಟ್ಗಳನ್ನು ನಿಯೋಜಿಸಲಾಗಿದ್ದು, 6,500 ಪಡಿತರ ಕಿಟ್ಗಳು, 33,843 ಔಷಧ ಕಿಟ್ಮತ್ತು 83,092 ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದು ವರದಿ ತಿಳಿಸಿದೆ. 16,629 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, 965 ಕ್ವಿಂಟಾಲ್ ಮೇವು ಒದಗಿಸಲಾಗಿದೆ. ಪ್ರವಾಹ ನಿರ್ವಹಣಾ ಕೇಂದ್ರಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ಸಹ ನಿಯೋಜಿಸಲಾಗಿದೆ.
ಪಿಲಿಭಿತ್ನಲ್ಲಿ ಶಾರದಾ, ದಿಯೋಹಾ ಮತ್ತು ಖಕ್ರ ನದಿಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಬನ್ಬಸಾ ಜಲಶಯದಿಂದ ಶಾರದಾ ನದಿಗೆ ಎರಡು ಲಕ್ಷ ಕ್ಯೂಸೆಕ್ಗಿಂತಲೂ ಹೆಚ್ಚು ನೀರನ್ನು ಮತ್ತು ನಾನಕ್ ಸಾಗರದಿಂದ ದಿಯೋಹಾ ನದಿಗೆ 30,000 ಕ್ಯೂಸೆಕ್ಗಿಂತಲೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

