ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನ್ನಲ್ಲಿ ದಿಢೀರ್ ಕಂಪನ ಅನುಭವಕ್ಕೆ ಬಂದಿದ್ದರಿಂದ, ಹತ್ತಿರದ ಕಟ್ಟಡಗಳ ನಿವಾಸಿಗಳು ತಮ್ಮ ಮನೆಗಳಿಂದ ಗಾಬರಿಯಲ್ಲಿ ಹೊರಗೆ ಓಡಿಬಂದರು. ಆದರೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಪಿಜಿ ವಸತಿಯ ಜಾಗದಲ್ಲಿ ಬರಿ ಕಟ್ಟಡದ ಅವಶೇಷಗಳು ಬಿದ್ದಿರುವ ಭೀಕರ ದೃಶ್ಯ ಅವರಿಗೆ ಎದುರಾಯಿತು.
ದೆಹಲಿ ವಿಶ್ವವಿದ್ಯಾನಿಲಯದ ಸೌತ್ ಕ್ಯಾಂಪಸ್ ಹತ್ತಿರದ ಖಾಸಗಿ ವಿದ್ಯಾರ್ಥಿ ಹಾಸ್ಟೆಲ್ಗಳು, ಉಪಹಾರ ಗೃಹಗಳು ಮತ್ತು ಅಂಗಡಿಗಳಿಂದ ಕೂಡಿದ ಕಿಕ್ಕಿರಿದ ಗಲ್ಲಿಯಲ್ಲಿದ್ದ 'ಹಾಸ್ಟೆಲ್ ಡೇಜ್''ಹಾಸ್ಟೆಲ್ ಡೇಜ್' ಎಂಬ ಐದು ಅಂತಸ್ತಿನ ಕಟ್ಟಡ ಕುಸಿದುಬಿದ್ದ ನಂತರ, ಜನರು ಕೈಗೆ ಸಿಕ್ಕ ಉಪಕರಣಗಳು ಮತ್ತು ಬರಿಗೈಗಳಿಂದಲೇ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಹರಸಾಹಸ ಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ ಪಿಟಿಐನೊಂದಿಗೆ ಮಾತನಾಡಿದ, ದೆಹಲಿ ಪೊಲೀಸಿನಲ್ಲಿ ಉದ್ಯೋಗಿಯಾಗಿರುವ ಸ್ಥಳೀಯ ನಿವಾಸಿ ರಾಜೇನ್ ಚೆಟ್ರಿ, 'ಈ ಕಟ್ಟಡದಲ್ಲಿ ಸುಮಾರು 15 ಕೊಠಡಿಗಳಿದ್ದವು, ಒಂದೊಂದು ಕೊಠಡಿಯಲ್ಲಿ ಇಬ್ಬರಿಂದ ಮೂರು ವಿದ್ಯಾರ್ಥಿಗಳು ವಾಸಿಸುತ್ತಿದ್ದರು. ಅವರು ಸುಮಾರು ₹12 ಸಾವಿರ ಬಾಡಿಗೆ ಪಾವತಿಸುತ್ತಿದ್ದರು. ಇಲ್ಲಿದ್ದ ಹೆಚ್ಚಿನ ವಿದ್ಯಾರ್ಥಿಗಳು ಕೇರಳ, ಹರಿಯಾಣ ಮತ್ತು ಉತ್ತರ ಪ್ರದೇಶದವರಾಗಿದ್ದರು. ಇವರು ಮೋತಿಲಾಲ್ ನೆಹರೂ ಕಾಲೇಜು, ಆತ್ಮಾರಾಮ್ ಸನಾತನ ಧರ್ಮ ಕಾಲೇಜು ಮತ್ತು ಶ್ರೀ ವೆಂಕಟೇಶ್ವರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು' ಎಂದು ಹೇಳಿದ್ದಾರೆ.
ನಾನು ಕಳೆದ 20 ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದೇನೆ. ಘಟನೆಗೂ ಮುನ್ನ ಈ ಕಟ್ಟಡದ ನೆಲಮಾಳಿಗೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದವು, ಅಲ್ಲಿ ನೀರು ನಿಲ್ಲಲು ಪ್ರಾರಂಭವಾಗಿತ್ತು. ಕಟ್ಟಡದ ತಳಪಾಯವೂ ಅತ್ಯಂತ ದುರ್ಬಲವಾಗಿತ್ತು ಎಂದು ಹೇಳಿದ್ದಾರೆ.
ಘಟನೆಯ ಕುರಿತು ಮಧ್ಯಾಹ್ನ 1.34ರ ಸುಮಾರಿಗೆ ಸೌತ್ ಕ್ಯಾಂಪಸ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ತಕ್ಷಣವೇ ಎಂಟು ಅಗ್ನಿಶಾಮಕ ವಾಹನಗಳು ಮತ್ತು ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು ಎಂದು ತಿಳಿಸಿದ್ದಾರೆ.
ನಮ್ಮ ಮನೆಯಲ್ಲಿ ಸಣ್ಣ ಕಂಪನ ಅನುಭವವಾಯಿತು. ಭೂಕಂಪವಾದಂತೆ ನೆಲ ನಡುಗಿದಂತಾಯಿತು. ನಾವು ತಕ್ಷಣ ಹೊರಗೆ ಓಡಿಬಂದೆವು. ತಕ್ಷಣಕ್ಕೆ ಯಾವುದೇ ಅಧಿಕೃತ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ, ಸಿಲುಕಿಕೊಂಡವರನ್ನು ಹುಡುಕಲು ನಿವಾಸಿಗಳೇ ಕಾಂಕ್ರೀಟ್ ಚಪ್ಪಡಿಗಳನ್ನು ಎತ್ತಿ ಅವಶೇಷಗಳನ್ನು ತೆರವುಗೊಳಿಸಲು ಪ್ರಾರಂಭಿಸಿದೆವು ಎಂದು ಸ್ಥಳೀಯ ನಿವಾಸಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕಟ್ಟಡದ ಮೇಲಿನ ಮಹಡಿಗಳಲ್ಲಿ ಸುಮಾರು 35 ರಿಂದ 40 ವಿದ್ಯಾರ್ಥಿಗಳು ತಂಗಿದ್ದು, ಕಟ್ಟಡ ಕುಸಿದಾಗ ಅವರಲ್ಲಿ ಕೆಲವರು ನಿದ್ರಿಸುತ್ತಿದ್ದರು. ಕಟ್ಟಡ ಕುಸಿಯುವ ಕೆಲವೇ ನಿಮಿಷಗಳ ಮೊದಲು ನಾನು ಹೊರಗೆ ಬಂದೆ. ತಕ್ಷಣ ಇಡೀ ಕಟ್ಟಡ ಧರೆಗುರುಳಿತು ಎಂದು ಅದರಲ್ಲಿ ವಾಸವಿದ್ದವರೊಬ್ಬರು ತಿಳಿಸಿದ್ದಾರೆ.
ಭಾನುವಾರವಾದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿರಲಿಲ್ಲ, ಪಿಜಿಯ ಒಳಗಡೆಯೇ ಇದ್ದರು. ಪಿಜಿಯಲ್ಲಿ ತಂಗಿದ್ದ ಹೆಚ್ಚಿನ ವಿದ್ಯಾರ್ಥಿಗಳು ಕೇರಳ, ಹರಿಯಾಣ ಮತ್ತು ಉತ್ತರ ಪ್ರದೇಶದವರಾಗಿದ್ದು, ಸಿಲುಕಿಕೊಂಡಿರುವ ಹಲವರು ಕೇರಳ ಮೂಲದವರು ಎಂದು ಶಂಕಿಸಲಾಗಿದೆ.

