ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಶ್ರೀಮಠದಲ್ಲಿ ನಡೆಯುತ್ತಿರುವ ಋಕ್ ಸಂಹಿತಾ ಯಾಗದ ಪೂರ್ಣಾಹುತಿ ಭಾನುವಾರ ನೆರವೇರಿತು.
ವೇದಮೂರ್ತಿ ವಸಂತ ಭಟ್ ನೆಲ್ಲಿತೀರ್ಥ ಅವರ ಪೌರೋಹಿತ್ಯದಲ್ಲಿ ಯಾಗ ನಡೆಯಿತು. ಹಲವು ಮಂದಿ ಋತ್ವಿಜರು ಯಾಗದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಯಾಗದ ಮಹತ್ವದ ಕುರಿತು ವಿದ್ವಾನ್ ಪಂಜ ಭಾಸ್ಕರ ಭಟ್ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.
ಯಕ್ಷಗಾನ ತಾಳಮದ್ದಳೆ ಅಷ್ಟಾಹಕ್ಕೆ ಚಾಲನೆ:
ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಅಷ್ಟಾಹಕ್ಕೆ ಭಾನುವರ ಚಾಲನೆ ನೀಡಲಾಯಿತು. ಈ ಸಂದರ್ಭ 'ರುಕ್ಮಾಂಗದ ಚರಿತ್ರೆ'
ಯಕ್ಷಗಾನ ತಾಳಮದ್ದಳೆ ಜರುಗಿತು. ಸೆ. 7ರಂದು ಸಂಜೆ 5ಕ್ಕೆ ಪಾರ್ತಿಸುಬ್ಬ ವಿರಚಿತ ಪಂಚವಟಿ-ಅಂಗದ ಸಂಧಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಅಷ್ಟಾಹ ಕಾರ್ಯಕ್ರಮ ಅಂಗವಾಗಿ ಸೆ. 13ರ ವರೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು.



