ನವದೆಹಲಿ: ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ಸಂಪೂರ್ಣ ಸುರಕ್ಷತಾ ಮೇಲ್ವಿಚಾರಣೆಯಲ್ಲಿರುವ ನಾಗರಿಕ ಮೂಲಸೌಕರ್ಯಗಳು ಹಾಗೂ ಶಾಂತಿಯುತ ಪರಮಾಣು ಸೌಲಭ್ಯಗಳ ಮೇಲೆ ನಡೆಯುತ್ತಿರುವ 'ಉದ್ದೇಶಪೂರ್ವಕ ದಾಳಿಗಳ' ಬಗ್ಗೆ ಬ್ರಿಕ್ಸ್ ನಾಯಕರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಸಶಸ್ತ್ರ ಸಂಘರ್ಷಗಳ ಸಂದರ್ಭದಲ್ಲಿಯೂ ಪರಮಾಣು ಸುರಕ್ಷತೆ, ಭದ್ರತೆಯನ್ನು ಯಾವಾಗಲೂ ಕಾಪಾಡಬೇಕು ಎಂದು ಅವರು ಒತ್ತಿ ಹೇಳಿದರು.
ಭಾರತ ಆಯೋಜಿಸಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನ ಅಂಗೀಕರಿಸಲಾದ 'ನವದೆಹಲಿ ಘೋಷಣೆ'ಯಲ್ಲಿ, ಪರಮಾಣು ಅಪಾಯ ಮತ್ತು ಹೆಚ್ಚುತ್ತಿರುವ ಸಂಘರ್ಷಗಳ ಬಗ್ಗೆಯೂ ನಾಯಕರು ಕಳವಳ ವ್ಯಕ್ತಪಡಿಸಿದರು.
ಮೊದಲ ದಿನದ ಚರ್ಚೆಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಅಂಗೀಕರಿಸಿರುವುದಾಗಿ ಪ್ರಕಟಿಸಿದರು.
ಈ ವೇಳೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಅಬುಧಾಬಿ ಯುವರಾಜ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಒಕ್ಕೂಟದ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇರಾನ್ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದರೂ, ಬ್ರಿಕ್ಸ್ ಜಂಟಿ ಘೋಷಣೆಯಲ್ಲಿ ಒಮ್ಮತಕ್ಕೆ ಬಂದವು.
ಈ ವೇಳೆ ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗಳು, ಅರಬ್ ರಾಷ್ಟ್ರಗಳ ಮೇಲೆ ಇರಾನ್ ಸೇನೆ ನಡೆಸಿದ ದಾಳಿಗಳ ಬಗ್ಗೆ ಯಾವುದೇ ನೇರ ಉಲ್ಲೇಖ ಮಾಡಲಿಲ್ಲ.
'ಪರಮಾಣು ಅಪಾಯ ಮತ್ತು ಸಂಘರ್ಷದ ಹೆಚ್ಚುತ್ತಿರುವ ಸಾಧ್ಯತೆಗಳ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ. ಜಾಗತಿಕ ಸ್ಥಿರತೆ, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗಾಗಿ ಶಸ್ತ್ರಾಸ್ತ್ರ ನಿಯಂತ್ರಣ ಹಾಗೂ ಪ್ರಸರಣ ತಡೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ವ್ಯವಸ್ಥೆಯ ಸಮಗ್ರತೆ ಮತ್ತು ಪರಿಣಾಮಕಾರಿತ್ವವನ್ನು ಕಾಪಾಡಬೇಕು' ಎಂದು ಘೋಷಣೆಯಲ್ಲಿ ಹೇಳಲಾಗಿದೆ.

