ನವದೆಹಲಿ: ಪ್ಯಾಕ್ ಮಾಡಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಮತ್ತು ಕೊಬ್ಬು ಇದ್ದರೆ ಅದನ್ನು ಪ್ಯಾಕೆಟ್ ನ ಮುಂಭಾಗದಲ್ಲೇ ಸ್ಪಷ್ಟವಾಗಿ ತಿಳಿಸುವ ಎಚ್ಚರಿಕೆ ಲೇಬಲ್ಗಳನ್ನು (FoPL) ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸೂಚಿಸಿದೆ.
FSSAI ಈ ಲೇಬಲ್ ವ್ಯವಸ್ಥೆಯನ್ನು ಎರಡು ಹಂತಗಳಲ್ಲಿ ಜಾರಿಗೆ ತರಲು ಯೋಜಿಸಿದೆ. ಆದರೆ ಎರಡು ಹಂತಗಳ ನಡುವೆ ಎಷ್ಟು ಸಮಯ ಇರಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಎರಡನೇ ಹಂತದ ಜಾರಿ ಅನಿರ್ದಿಷ್ಟವಾಗಿ ಮುಂದೂಡಿಕೆಯಾಗಬಾರದು. ವೈಜ್ಞಾನಿಕ ಆಧಾರದ ಮೇಲೆ ಸ್ಪಷ್ಟ ಗಡುವು ನಿಗದಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಹೇಳಿದೆ.
ಎರಡು ಹಂತದ ಯೋಜನೆ:
FSSAIಯ ಪ್ರಸ್ತುತ ಯೋಜನೆಯಂತೆ, ಮೊದಲ ಹಂತದಲ್ಲಿ ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂತಹ ಕಾಳಜಿಯ ಪೋಷಕಾಂಶಗಳಲ್ಲಿ ಕನಿಷ್ಠ ಎರಡು ಅಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಎಚ್ಚರಿಕೆ ಲೇಬಲ್ ಹಾಕಬೇಕು.
ಎರಡನೇ ಹಂತದಲ್ಲಿ, ಈ ಮೂರರಲ್ಲಿ ಯಾವುದೇ ಒಂದು ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದರೂ ಎಚ್ಚರಿಕೆ ಲೇಬಲ್ ಹಾಕುವಂತೆ ನಿಯಮ ವಿಸ್ತರಿಸಲು ಉದ್ದೇಶಿಸಲಾಗಿದೆ.
ಗ್ರಾಹಕರು ಹೊಸ ಲೇಬಲ್ ವ್ಯವಸ್ಥೆಗೆ ಹೊಂದಿಕೊಳ್ಳಲು ಮತ್ತು ಆಹಾರ ತಯಾರಕರು ತಮ್ಮ ಉತ್ಪನ್ನಗಳಲ್ಲಿರುವ ಪದಾರ್ಥಗಳ ಪ್ರಮಾಣವನ್ನು ಬದಲಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂಬ ಕಾರಣಕ್ಕೆ FSSAI ಈ ಎರಡು ಹಂತದ ವಿಧಾನವನ್ನು ಪ್ರಸ್ತಾಪಿಸಿತ್ತು.
ಆದರೆ ಈ ಎರಡು ಹಂತಗಳ ನಡುವಿನ ಅವಧಿಗೆ ಸ್ಪಷ್ಟ ಗಡುವು ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಅಥವಾ ಕೊಬ್ಬು ಹೊಂದಿರುವ ಉತ್ಪನ್ನಗಳನ್ನು ಮೊದಲು ಎಚ್ಚರಿಕೆ ಲೇಬಲ್ ವ್ಯಾಪ್ತಿಗೆ ತಂದು, ನಂತರ ಹಂತಹಂತವಾಗಿ ಕಡಿಮೆ ಮಿತಿಯ ಉತ್ಪನ್ನಗಳಿಗೂ ನಿಯಮ ಅನ್ವಯಿಸುವ ಪರ್ಯಾಯ ವ್ಯವಸ್ಥೆಯನ್ನೂ ಪರಿಶೀಲಿಸುವಂತೆ FSSAIಗೆ ನ್ಯಾಯಾಲಯ ಸೂಚಿಸಿದೆ.
'ಎರಡು ಪೋಷಕಾಂಶ ಏಕೆ?'
ಒಂದು ಪೋಷಕಾಂಶದ ಪ್ರಮಾಣವೇ ಆರೋಗ್ಯಕ್ಕೆ ಅಪಾಯ ಉಂಟುಮಾಡುವಷ್ಟು ಹೆಚ್ಚಿದ್ದರೆ, ಎಚ್ಚರಿಕೆ ಲೇಬಲ್ ಹಾಕಲು ಕನಿಷ್ಠ ಎರಡು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರಬೇಕು ಎಂಬ ನಿಯಮ ಏಕೆ ಬೇಕು ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಎರಡು ಪೋಷಕಾಂಶಗಳ ಷರತ್ತಿಗೆ ವೈಜ್ಞಾನಿಕ ಆಧಾರವಿಲ್ಲ. ಇದರಿಂದ ಹಲವು ಉತ್ಪನ್ನಗಳು ಮೊದಲ ಹಂತದ ನಿಯಮದಿಂದ ಹೊರಗುಳಿಯುತ್ತವೆ ಎಂಬ ಅರ್ಜಿದಾರರ ವಾದವನ್ನೂ ಪೀಠ ಗಮನಿಸಿದೆ.
ಅಲ್ಟ್ರಾ-ಸಂಸ್ಕರಿತ ಆಹಾರ ಮತ್ತು ಕಡಿಮೆ ಸಂಸ್ಕರಿಸಿದ ಪ್ಯಾಕ್ ಮಾಡಿದ ಆಹಾರಗಳಿಗೆ ಒಂದೇ ಮಿತಿ ಅನ್ವಯಿಸುವುದೂ ಸರಿಯೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ. ಆಹಾರ ಎಷ್ಟು ಪ್ರಮಾಣದಲ್ಲಿ ಸಂಸ್ಕರಿಸಲಾಗಿದೆ ಎಂಬುದನ್ನು ಆಧರಿಸಿ ವಿಭಿನ್ನ ಮಿತಿಗಳನ್ನು ನಿಗದಿಪಡಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ FSSAIಗೆ ಸೂಚಿಸಲಾಗಿದೆ.
ಮೊದಲ ಹಂತದಲ್ಲಿ ಯಾವ 'ನಿರ್ದಿಷ್ಟ ಸಿಹಿ ಪಾನೀಯಗಳು' ಸೇರಲಿವೆ ಮತ್ತು ಅವುಗಳಿಗೆ ಅನ್ವಯಿಸುವ ಮಿತಿಗಳು ಯಾವುವು ಎಂಬುದನ್ನೂ ಸ್ಪಷ್ಟಪಡಿಸುವಂತೆ ನ್ಯಾಯಾಲಯ ಹೇಳಿದೆ.
ಶಾಲೆಗಳಲ್ಲಿ ಪೌಷ್ಟಿಕಾಂಶ ಶಿಕ್ಷಣ:
ಆಹಾರದ ಬಗ್ಗೆ ಮಕ್ಕಳಿಗೆ ಸರಿಯಾದ ಮಾಹಿತಿ ಇಲ್ಲದಿರುವುದು ಅಥವಾ ಜಾಹೀರಾತು, ರುಚಿ ಮತ್ತಿತರ ತಕ್ಷಣದ ಪ್ರೇರಣೆಗಳಿಂದ ಅವರು ಆಹಾರ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಹೀಗಾಗಿ ಶಾಲಾ ಪಠ್ಯಕ್ರಮದಲ್ಲೇ ಪೌಷ್ಟಿಕಾಂಶ ಸಾಕ್ಷರತೆ ಸೇರಿಸುವ ಬಗ್ಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ.
ಆಹಾರದಲ್ಲಿರುವ ಪೌಷ್ಟಿಕಾಂಶಗಳ ಮಾಹಿತಿ, ಪ್ಯಾಕೆಟ್ನ ಮುಂಭಾಗದಲ್ಲಿರುವ ಎಚ್ಚರಿಕೆ ಲೇಬಲ್ ಗಳನ್ನು ಹೇಗೆ ಓದಬೇಕು ಮತ್ತು ಆರೋಗ್ಯಕ್ಕೆ ಸೂಕ್ತವಾದ ಆಹಾರವನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಲೇಬಲ್ ಕೇವಲ ಬರಹವಾಗಿರಬಾರದು:
FSSAI 'HIGH FAT', 'HIGH SUGAR' ಮತ್ತು 'HIGH SALT' ಎಂಬ ಪದಗಳನ್ನು ಒಳಗೊಂಡ ಕೆಂಪು ಷಟ್ ಬುಜಾಕಾರದ ಎಚ್ಚರಿಕೆ ಲೇಬಲ್ ಅನ್ನು ಪ್ರಸ್ತಾಪಿಸಿದೆ.
ಆದರೆ ಈ ಲೇಬಲ್ ನ ಗಾತ್ರ ಎಷ್ಟು ಇರಬೇಕು ಮತ್ತು ಪ್ಯಾಕೆಟ್ನಲ್ಲಿ ಎಲ್ಲಿರಬೇಕು ಎಂಬ ಬಗ್ಗೆ ಸಾಕಷ್ಟು ಮಾಹಿತಿ ನೀಡಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇವಲ ಪದಗಳನ್ನು ಬಳಸುವ ಲೇಬಲ್ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಲಾಗದು. ಭಾರತದಲ್ಲಿ ವಿವಿಧ ಭಾಷೆ, ವಯಸ್ಸು ಮತ್ತು ಪ್ರದೇಶಗಳ ಜನರಿದ್ದಾರೆ. ಆದ್ದರಿಂದ ಪದಗಳ ಜತೆಗೆ ಸಕ್ಕರೆ, ಉಪ್ಪು, ಕೊಬ್ಬಿನಂತಹ ಪೋಷಕಾಂಶಗಳನ್ನು ಚಿತ್ರಗಳ ಮೂಲಕವೂ ತೋರಿಸುವ ವ್ಯವಸ್ಥೆ ಇರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇದರಿಂದ ದೇಶದ ವೈವಿಧ್ಯಮಯ ಜನರಿಗೆ ಲೇಬಲ್ ನಲ್ಲಿರುವ ಮಾಹಿತಿ ಸುಲಭವಾಗಿ ಅರ್ಥವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಸಕ್ಕರೆ, ಉಪ್ಪು ಕಡಿಮೆ ಮಾಡಿದರೆ ಮತ್ತೊಂದು ಅಪಾಯ:
ಆಹಾರದಲ್ಲಿನ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವ ಕ್ರಮದಿಂದ ಮತ್ತೊಂದು ಸಮಸ್ಯೆ ಉಂಟಾಗುವ ಸಾಧ್ಯತೆಯನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ರುಚಿ, ಆಹಾರದ ವಿನ್ಯಾಸ ಮತ್ತು ಬಾಳಿಕೆ ಅವಧಿ ಕಾಪಾಡಿಕೊಳ್ಳಲು ತಯಾರಕರು ಕೃತಕ ಸಂರಕ್ಷಕಗಳು, ಬೇರ್ಪಡದ ಆಹಾರ ಮತ್ತು ಇತರ ಸೇರ್ಪಡೆಗಳನ್ನು ಹೆಚ್ಚಾಗಿ ಬಳಸುವ ಸಾಧ್ಯತೆ ಇದೆ. ಇದು ಅನಿರೀಕ್ಷಿತ ಹಾಗೂ ದುರದೃಷ್ಟಕರ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಪೀಠ ಎಚ್ಚರಿಸಿದೆ.
ಆದ್ದರಿಂದ ಪ್ಯಾಕ್ ಮಾಡಿದ ಆಹಾರಗಳಲ್ಲಿ ಇಂತಹ ರಾಸಾಯನಿಕಗಳ ಬಳಕೆಗೆ ಸಂಬಂಧಿಸಿದ ನಿಯಮಗಳು ಮತ್ತು ಮಿತಿಗಳನ್ನು ರೂಪಿಸುವಾಗ ಈ ಅಪಾಯವನ್ನೂ ಗಮನದಲ್ಲಿಟ್ಟುಕೊಳ್ಳುವಂತೆ FSSAIಗೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರ ಮತ್ತು FSSAI ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಬ್ರಿಜೇಂದರ್ ಚಹಾರ್ ಅವರು ಸೆ.9ರಂದು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಂತೆ, ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಪೈಕಿ ಯಾವುದೇ ಒಂದರ ಪ್ರಮಾಣ ಹೆಚ್ಚಿದ್ದರೂ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸಲು ಸರ್ಕಾರ ಸಿದ್ಧವಿದೆ.
ಇದು ಈ ಹಿಂದಿನ FSSAI ಪ್ರಸ್ತಾವನೆಗಿಂತ ಭಿನ್ನವಾಗಿದೆ. ಈ ಹಿಂದೆ ಎರಡು ಅಥವಾ ಅದಕ್ಕಿಂತ ಹೆಚ್ಚು ಕಾಳಜಿಯ ಪೋಷಕಾಂಶಗಳು ನಿಗದಿತ ಮಿತಿಗಿಂತ ಹೆಚ್ಚಿದ್ದರೆ ಮಾತ್ರ ಎಚ್ಚರಿಕೆ ಲೇಬಲ್ ಹಾಕುವ ಪ್ರಸ್ತಾವವಿತ್ತು.
10 ದಿನಗಳಲ್ಲಿ ಉತ್ತರ:
ನ್ಯಾಯಾಲಯ ಎತ್ತಿರುವ ಎಲ್ಲ ಪ್ರಶ್ನೆಗಳು ಮತ್ತು ಆತಂಕಗಳಿಗೆ ಉತ್ತರ ಹಾಗೂ ಸ್ಪಷ್ಟನೆ ನೀಡುವ ಅಫಿಡವಿಟ್ನ್ನು 10 ದಿನಗಳೊಳಗೆ ಸಲ್ಲಿಸುವಂತೆ FSSAIಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಪ್ರಕರಣದ ಮುಂದಿನ ವಿಚಾರಣೆ ಸೆ.28ರಂದು ನಡೆಯಲಿದೆ.
ಸಾರ್ವಜನಿಕ ಆರೋಗ್ಯದ ಮೇಲೆ ಆಹಾರ ಸುರಕ್ಷತಾ ನಿಯಮಗಳ ಪರಿಣಾಮ, ಅದರಲ್ಲೂ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ನ್ಯಾಯಾಲಯ ಈ ಹಿಂದೆಯೂ ಕಳವಳ ವ್ಯಕ್ತಪಡಿಸಿತ್ತು.
'ಜನರ ಆರೋಗ್ಯದ ಬಗ್ಗೆ, ಅದರಲ್ಲೂ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಯ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹಕರಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ' ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದ್ದರು.
ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಮುಂಭಾಗದ ಎಚ್ಚರಿಕೆ ಲೇಬಲ್ಗಳನ್ನು ಕಡ್ಡಾಯಗೊಳಿಸುವಂತೆ ವಕೀಲ ರಾಜೀವ್ ಶಂಕರ್ ದ್ವಿವೇದಿ ಪ್ರತಿನಿಧಿಸುವ 3S ಮತ್ತು ನಮ್ಮ ಆರೋಗ್ಯ ಸೊಸೈಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಸೂಚನೆಗಳನ್ನು ನೀಡಿದೆ.

