ಡೆಹ್ರಾಡೂನ್/ರುದ್ರಪ್ರಯಾಗ: ಉತ್ತರಾಖಂಡದ ಕೇದಾರನಾಥದಲ್ಲಿ ಮಳೆಯಿಂದಾಗಿ ಬಂಡೆಗಳು ಉರುಳಿ ಬಿದ್ದು 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀರ್ಬಾಸಾ ಹೆಲಿಪ್ಯಾಡ್ ಸಮೀಪ ಬೆಟ್ಟದಿಂದ ಉರುಳಿಬಂದ ಬಂಡೆಗಳು ಉಖಿಮಠ ನಿವಾಸಿ ಮದನ್ ಮೋಹನ್ ತಿವಾರಿ ಅವರ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಮಳೆಯಿಂದಾಗಿ ಯಾತ್ರಾ ಮಾರ್ಗದಲ್ಲಿ ಅವಶೇಷಗಳು ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಕೇದಾರನಾಥದತ್ತ ತೆರಳುವ ಯಾತ್ರಿಕರು ಸೋನ್ಪ್ರಯಾಗ ಮತ್ತು ಗೌರಿಕುಂಡ್ನಲ್ಲಿ ಹಾಗೂ ವಾಪಸ್ ಬರುತ್ತಿರುವವರು ಜಂಗಲ್ಚಟ್ಟಿಯಲ್ಲಿ ತಂಗುವಂತೆ ಸೂಚಿಸಲಾಗಿದೆ.
ಮಾರ್ಗವನ್ನು ತೆರವುಗೊಳಿಸಿ ಅಧಿಕೃತ ಅನುಮತಿ ದೊರೆಯುವವರೆಗೆ ಯಾತ್ರಿಕರು ಮುಂದೆ ಸಾಗದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹವಾಮಾನ ಸುಧಾರಿಸಿ ಮಾರ್ಗ ಸುರಕ್ಷಿತವೆಂದು ಖಚಿತವಾದ ಬಳಿಕವೇ ಯಾತ್ರೆ ಪುನರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

