ನವದೆಹಲಿ (PTI): 'ಅನಿರ್ದಿಷ್ಟಾವಧಿಗೆ ಮುಂದೂಡಿರುವ ಸಂಸತ್ ಅಧಿವೇಶನವನ್ನು ಮುಕ್ತಾಯಗೊಳಿಸಲು ವಿಳಂಬ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೊಸ ದಾಖಲೆಯನ್ನು ನಿರ್ಮಿಸಿದೆ' ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
'ಲೋಕಸಭೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರನೇ ಎರಡರಷ್ಟು ಬಹುಮತಕ್ಕಾಗಿ ಇತರ ಪಕ್ಷಗಳ 'ಕಳಂಕಿತ' ನಾಯಕರನ್ನು ಸೆಳೆಯಲು ಸಂಚು ರೂಪಿಸಿದ್ದಾರೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು 'ಎಕ್ಸ್' ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
'ಎಲ್ಲ ಪಕ್ಷಗಳ ಒಪ್ಪಿಗೆಯನ್ನು ಪಡೆಯಲು, ಕ್ಷೇತ್ರ ಪುನರ್ ವಿಂಗಡಣೆ ಕುರಿತಾದ ಪ್ರಸ್ತಾಪಗಳನ್ನು ಚರ್ಚಿಸಲು ಮೋದಿ ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆಯಲು ಏಕೆ ನಿರಾಕರಿಸುತ್ತಿದೆ' ಎಂದು ಪ್ರಶ್ನಿಸಿದ್ದಾರೆ.
'ಸಂಸತ್ತಿನ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಶುಕ್ರವಾರಕ್ಕೆ 29 ದಿನಗಳಾಗಿವೆ. 2015ರ ಮುಂಗಾರು ಅಧಿವೇಶನದಲ್ಲಿ ಇದರ ನಡುವಿನ ಅಂತರ 28 ದಿನಗಳಾಗಿತ್ತು. ಈ ಮೂಲಕ ಮೋದಿ ಸರ್ಕಾರವು ತನ್ನ ಹಳೆಯ ದಾಖಲೆಯನ್ನೇ ಮೀರಿಸಿದೆ' ಎಂದು ದೂರಿದ್ದಾರೆ.
'ಸಾಮಾನ್ಯವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ 3-4 ದಿನಗಳ ನಂತರ ಅಧಿವೇಶನದ ಸಮಾಪ್ತಿ ಆಗುತ್ತದೆ' ಎಂದು ತಿಳಿಸಿದ್ದಾರೆ.
'ವಾಸ್ತವ ಅರಿತುಕೊಳ್ಳದ ಶಾ'
'ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಅತಿಯಾದ ಆತ್ಮವಿಶ್ವಾಸ ಸುಳ್ಳು ಬೆದರಿಕೆ ಮತ್ತು ಡಂಬಾಚಾರದ ವರ್ತನೆಯು ಕೇಂದ್ರ ಗೃಹ ಸಚಿವರು ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಬಿಡುತ್ತಿಲ್ಲ' ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. 'ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸದೆ ತನ್ನನ್ನು ತಾನು ಚಾಣಕ್ಯ ಎಂದು ಕರೆದುಕೊಳ್ಳುವ ವ್ಯಕ್ತಿಯು ತಾನು ಎದುರಾಳಿಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದೇನೆ ಮತ್ತು ಬುದ್ಧಿವಂತಿಕೆಯ ಆಟ ಆಡುತ್ತಿದ್ದೇನೆ ಎಂದು ಭಾವಿಸಿರಬಹುದು. ಆದರೆ ಇದು ಮೂರ್ಖತನದ ಸಂಗತಿ. ಯಾವುದೇ ಉದ್ದೇಶಕ್ಕಾಗಿ ಯಾವುದೇ ಸಮಯದಲ್ಲಿ ಅಧಿವೇಶನ ನಡೆಸಲು ಸರ್ಕಾರಕ್ಕೆ ಅಧಿಕಾರವಿದೆ' ಎಂದು ತಿಳಿಸಿದ್ದಾರೆ.

