ನವದೆಹಲಿ (PTI): ಮಲೇಷ್ಯಾ, ವಿಯೆಟ್ನಾಂ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇಥಿಯೋಪಿಯಾ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನ ಪರಿಸ್ಥಿತಿಯಿಂದ ವ್ಯಾಪಾರ ಮತ್ತು ಪೂರೈಕೆ ಸರಪಳಿಗಳ ರಕ್ಷಣೆ, ಅಪರೂಪದ ಖನಿಜಗಳು, ಇಂಧನ ಮತ್ತು ಆಹಾರ ಭದ್ರತೆ ಕುರಿತು ನಾಯಕರು ಕೇಂದ್ರೀಕರಿಸಿದರು.
ಅಬುಧಾಬಿಯ ಯುವರಾಜ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ ಮೋದಿ, ಪಶ್ಚಿಮ ಏಷ್ಯಾದ ಒಟ್ಟಾರೆ ಪರಿಸ್ಥಿತಿ ಮತ್ತು ಭಾರತ-ಯುಎಇ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
'ರಕ್ಷಣೆ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಅಪರೂಪದ ಖನಿಜಗಳು, ಇಂಧನ, ಆಹಾರ ಭದ್ರತೆ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ಚರ್ಚಿಸಲಾಯಿತು. ಪಶ್ಚಿಮ ಏಷ್ಯಾದಲ್ಲಿ ಅನಿಶ್ಚಿತತೆ ಇರುವ ಈ ಸಮಯದಲ್ಲಿ, ಬಲವಾದ ಭಾರತ-ಯುಎಇ ಸಂಬಂಧವು ಸ್ಥಿರತೆ, ಸಮೃದ್ಧಿ ಮತ್ತು ಶಾಂತಿಯ ಸಂಕೇತವಾಗಿದೆ' ಎಂದು ಮೋದಿ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮಲೇಷ್ಯಾ ಪ್ರಧಾನಿ ಅನ್ವರ್ ಬಿನ್ ಇಬ್ರಾಹಿಂ ಅವರೊಂದಿಗೆ ನಡೆದ ಸಭೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಅರೆವಾಹಕಗಳು, ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆ, ಇಂಧನ ಮತ್ತು ಫಿನ್ಟೆಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿ ಕುರಿತು ಚರ್ಚಿಸಿದರು.
'ಸಬಾದ ಕೋಟಾ ಕಿನಾಬಾಲುವಿನಲ್ಲಿ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸ್ಥಾಪಿಸಲು ಮಲೇಷ್ಯಾದ ಸಮ್ಮತಿಸಿದೆ' ಎಂದು ಇಬ್ರಾಹಿಂ ಅವರು ಮೋದಿ ಅವರಿಗೆ ತಿಳಿಸಿದರು.
ವಿಯೆಟ್ನಾಂ ಪ್ರಧಾನಿ ಲೆ ಮಿನ್ಹ್ ಹಂಗ್ ಅವರೊಂದಿಗೆ ನಡೆದ ಸಭೆಯು, ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಮೇಲೆ ಕೇಂದ್ರೀಕರಿಸಿತು. ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಉಭಯ ದೇಶಗಳ ನಾಯಕರು ಪುನರುಚ್ಚರಿಸಿದರು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಹಾಗೂ ಮೋದಿ ಅವರ ನಡುವಿನ ಮಾತುಕತೆಗಳು, ರಕ್ಷಣೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ದ್ವಿಮುಖ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಸುತ್ತ ಕೇಂದ್ರೀಕೃತವಾಗಿದ್ದವು ಎಂದು ಸಚಿವಾಲಯ ಮಾಹಿತಿ ನೀಡಿದೆ.

