ನವದೆಹಲಿ (PTI): ತಮ್ಮ ಸಾಕು ನಾಯಿಯ ವಿಹಾರಕ್ಕಾಗಿ ಕ್ರೀಡಾಪಟುಗಳನ್ನು ಹೊರಹಾಕಿ ಇಡೀ ಕ್ರೀಡಾಂಗಣವನ್ನೇ ಖಾಲಿ ಮಾಡಿಸಿದ್ದ ಆರೋಪದಲ್ಲಿ ಕೇಂದ್ರ ಸರ್ಕಾರವು 'ಕಡ್ಡಾಯ ನಿವೃತ್ತಿ'ಗೊಳಿಸಿದ ಐಎಎಸ್ ಅಧಿಕಾರಿ ರಿಂಕು ಧುಗ್ಗಾ ಅವರನ್ನು ಕರ್ತವ್ಯಕ್ಕೆ ಮರು ನೇಮಕ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
2022ರಲ್ಲಿ ಘಟನೆ ನಡೆದಿತ್ತು. ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ತಮ್ಮ ನಾಯಿಯ ವಿಹಾರಕ್ಕಾಗಿ ರಿಂಕು ಧುಗ್ಗಾ ಖಾಲಿ ಮಾಡಿಸಿದ್ದರು. ಅವರ ಪತಿಯೂ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯ ಕಠಿಣ ಕ್ರಮ ಕೈಗೊಂಡಿದ್ದವು.
ಕೇಂದ್ರದ 'ಕಡ್ಡಾಯ ನಿವೃತ್ತಿ' ನಿರ್ಧಾರವನ್ನು ಧುಗ್ಗಾ ಅವರು ಕೇಂದ್ರ ಆಡಳಿತ ನ್ಯಾಯಮಂಡಳಿಯಲ್ಲಿ (ಸಿಎಟಿ) ಪ್ರಶ್ನಿಸಿದ್ದರು. ಸಿಎಟಿ ಅವರನ್ನು ಮರು ನೇಮಕ ಮಾಡಲು ಆದೇಶಿಸಿತ್ತು. ದೆಹಲಿ ಹೈಕೋರ್ಟ್ ಏಪ್ರಿಲ್ 15ರಂದು ಪ್ರಕಟಿಸಿದ ತೀರ್ಪಿನಲ್ಲಿ ಸಿಎಟಿ ನಿರ್ಧಾರವನ್ನು ಎತ್ತಿ ಹಿಡಿದಿತ್ತು. 'ಕೆಲಸಕ್ಕೆ ಅಸಮರ್ಥರಾದವರನ್ನು 'ಕಡ್ಡಾಯವಾಗಿ ನಿವೃತ್ತಿ'ಗೊಳಿಸಬಹುದು, ಈ ತತ್ವವು ರಿಂಕು ಧುಗ್ಗಾ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ' ಎಂದು ಹೇಳಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರಿದ್ದ ಪೀಠವು ಧುಗ್ಗಾ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
'ಪ್ರತಿವಾದಿಯ ಮರು ನೇಮಕಕ್ಕೆ ತಡೆ ಮುಂದುವರಿಯುತ್ತದೆ' ಎಂದಿರುವ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಪಟ್ಟಿ ಮಾಡಿದೆ. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

