ಪೆರ್ಲ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯೆ ಆಯಿಷಾ ಎ.ಎ. ಪೆರ್ಲ ಅವರ ನೇತೃತ್ವದಲ್ಲಿ ತಮ್ಮ ವಾರ್ಡಿನ ಹಿರಿಯ ನಿವೃತ್ತ ಶಿಕ್ಷಕರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿ ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ವಾಸುದೇವ ಭಟ್ (ಶಿವ ಪಡ್ರೆ) ಮತ್ತು ಅವರ ಪತ್ನಿ, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಪ್ರಭಾವತಿ ಟೀಚರ್ ದಂಪತಿಯನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ಹಲವು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ ಅಹಮ್ಮದ್ ಅಲಿ ಮಾಸ್ಟರ್, ಪೆರ್ಲದ ನಿವೃತ್ತ ಶಿಕ್ಷಕಿಯರಾದ ಜಯಕುಮಾರಿ ಟೀಚರ್ ಹಾಗೂ ಸರೋಜ ಟೀಚರ್ ಪೆರ್ಲ ಅವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು.
ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕಿದ ಗುರುಗಳ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಮೂಲಕ, ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಸಾರುವ ಕೆಲಸವನ್ನು ಜನಪ್ರತಿನಿಧಿಯೊಬ್ಬರು ನಡೆಸಿರುವುದು ಶ್ಲಾಘನೆಗೂ ಕರಣವಯಿತು.
ಈ ಸಂದರ್ಭ ಕೇರಳ ರಾಜ್ಯ ಕಿರು ಕೈಗಾರಿಕಾ ವ್ಯವಸಾಯಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಜರಾಮ ಪೆರ್ಲ, ಕೆಇಬಿ ನಿವೃತ್ತ ಸಹಾಐಕ ಇಂಜಿನಿಯರ್ ಅಬ್ದುಲ್ ರಜಾಕ್ ಪೆರ್ಲ, ನಿವೃತ್ತ ಸಬ್ ರಿಜಿಸ್ಟ್ರಾರ್ ಮೊಹಮ್ಮದಾಲಿ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕರು ಕೇವಲ ಪಾಠ ಹೇಳಿಕೊಡುವವರಲ್ಲ; ಬದುಕಿನ ದಾರಿಯಲ್ಲಿ ಬೆಳಕಿನ ಹೆಜ್ಜೆ ಗುರುತು ಮೂಡಿಸುವ ಮಾರ್ಗದರ್ಶಕರು. ಇಂತಹ ಗುರುಗಳ ಸೇವೆಯನ್ನು ನೆನಪಿಸಿಕೊಂಡು, ಅವರ ಮನೆಬಾಗಿಲಿಗೆ ತೆರಳಿ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಆಯಿಷಾ ಪೆರ್ಲ ತಿಳಿಸಿದ್ದಾರೆ.



