ವಡೋದರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಛಾತ್ರೋಂ ಕೀ ಗೂಂಜ್' ವಿದ್ಯಾರ್ಥಿ ಸಂವಾದ ಅಭಿಯಾನವನ್ನು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅದನ್ನು 'ಜೂಠ್ ಕೀ ಗೂಂಜ್' (ಸುಳ್ಳಿನ ಪ್ರತಿಧ್ವನಿ) ಎಂದು ಕರೆದಿದ್ದಾರೆ.
ವಡೋದರದಲ್ಲಿ ₹35 ಸಾವಿರ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಇಂದಿನ ಯುವಜನತೆ ಸತ್ಯದ ಪರವಾಗಿ ನಿಲ್ಲಲಿದ್ದು, ವಿರೋಧ ಪಕ್ಷಗಳ ಸುಳ್ಳಿನ ಪ್ರಚಾರದಿಂದ ದಾರಿ ತಪ್ಪುವುದಿಲ್ಲ' ಎಂದು ಹೇಳಿದ್ದಾರೆ.
'ಪ್ರತಿಯೊಂದು ಮೂಲೆಯಲ್ಲೂ 'ಜೂಠ್ ಕೀ ಗೂಂಜ್' ಮೂಲಕ ಯುವಜನತೆಯನ್ನು ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ಆದರೆ ದೇಶದ ಯುವಕರು ಸತ್ಯದ ಪರವಾಗಿ ನಿಲ್ಲಲಿದ್ದಾರೆ' ಎಂದಿದ್ದಾರೆ.
'ಛಾತ್ರೋಂ ಕೀ ಗೂಂಜ್' ಕಾಂಗ್ರೆಸ್ ಆರಂಭಿಸಿರುವ ವಿದ್ಯಾರ್ಥಿ ಸಂವಾದ ಅಭಿಯಾನವಾಗಿದ್ದು, ಇದರ ಅಡಿಯಲ್ಲಿ ದೇಶಾದ್ಯಂತ ವಿವಿಧ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಇದೇ ವೇಳೆ ನವಿ ಮುಂಬೈನ ಜವಾಹರಲಾಲ್ ನೆಹರೂ ಬಂದರನ್ನು ಉತ್ತರ ಪ್ರದೇಶದ ದಾದ್ರಿಯೊಂದಿಗೆ ಸಂಪರ್ಕಿಸುವ 'ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್'ನ ಮೂರು ಪ್ರಮುಖ ವಿಭಾಗಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸರಕು ಸಾಗಣೆಗೆ ಮೀಸಲಾದ ಕಾರಿಡಾರ್ಗಳು ದೇಶದ ಆರ್ಥಿಕ ಬೆಳವಣಿಗೆಗೆ ಜೀವನಾಡಿಯಾಗಿವೆ ಎಂದು ಹೇಳಿದ್ದಾರೆ.
'ಈ ಆಧುನಿಕ ಸರಕು ಸಾಗಣೆ ಜಾಲದಿಂದ ಭಾರತದ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ನಾವು ಈ ಯೋಜನೆಗೆ ವೇಗ ನೀಡಿದ್ದೇವೆ. ಇಂದು ಈ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ' ಎಂದು ತಿಳಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸಿದ ಅವರು, 'ನಮ್ಮ ಸರ್ಕಾರ 50 ಸಾವಿರ ರೈಲು ಕೋಚ್ಗಳನ್ನು ನಿರ್ಮಿಸಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ 50 ಸಾವಿರ ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಿರಲಿಲ್ಲ' ಎಂದು ಆರೋಪಿಸಿದ್ದಾರೆ.

