ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಯುವಜನತೆ ಮುಂದಾಗಬೇಕು-ಶೋಭನಾ ಜಾರ್ಜ್
0
ಡಿಸೆಂಬರ್ 08, 2018
ಮಂಜೇಶ್ವರ: ಸರಕಾರಿ ಉದ್ಯೋಗ ಇಲ್ಲವೇ ವಿದೇಶದಲ್ಲಿ ಉದ್ಯೋಗವನ್ನು ನಿರೀಕ್ಷಿಸಿ ಯೌವನವನ್ನು ವ್ಯರ್ಥಗೊಳಿಸುವ ಬದಲು ವ್ಯವಸ್ಥಿತ ಕ್ರಿಯಾ ಯೋಜನೆ,ದೃಢ ನಿರ್ಧಾರ ಹಾಗೂ ಪ್ರಾಮಾಣಿಕತೆಗಳನ್ನು ಮೂಲಧನವನ್ನಾಗಿಸಿ ಸ್ವೋದ್ಯೋಗ ಕೈಗೊಳ್ಳಲು ಮುಂದಾಗುವ ಜನರಿಗೆ ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯು ಎಲ್ಲಾ ಸಹಕಾರಗಳನ್ನೂ ಒದಗಿಸಲು ಮುಂದಾಗುವುದೆಂದು ರಾಜ್ಯ ಖಾದಿ ಮಂಡಳಿ ಉಪಾಧ್ಯಕ್ಷೆ ಶೋಭನಾ ಜಾರ್ಜ್ ಘೋಷಿಸಿದ್ದಾರೆ.
ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ಮಂಜೇಶ್ವರ ಶಾಂತಿಸೇನಾ ಫೌಂಡೇಶನ್ ಮಂಜೇಶ್ವರ ಹೊಸಂಗಡಿಯ ಗೇಟ್ ವೇ ಆಡಿಟೋರಿಯಂನಲ್ಲಿ ಜಂಟಿಯಾಗಿ ಶುಕ್ರವಾರ ಅಪರಾಹ್ನ ಆಯೋಜಿಸಿದ್ದ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಜಿಲ್ಲಾ ಮಟ್ಟದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ವಾವಲಂಬಿ ಮಹಿಳೆಯರು ಕುಟುಂಬ ಹಾಗೂ ಸಮಾಜದ ಐಶ್ವರ್ಯಗಳಾಗಿದ್ದಾರೆ. ಈ ಹಿಂದಿಗಿಂತ ಮಹಿಳೆಯರು ಸ್ವ ಉದ್ಯೋಗಕ್ಕೆ ಮುಂದೆ ಬರುತ್ತಿದ್ದಾರೆ. ಪ್ರಾಮಾಣಿಕತೆ ಹಾಗೂ ದೃಢಸಂಕಲ್ಪದಿಂದ ಮಹಿಳೆಯರು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು ಆರಂಭಿಸಿದ ಹಲವಾರು ಉದ್ಯಮಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ವೋದ್ಯೋಗ ಹಾಗೂ ಉದ್ಯಮಶೀಲತೆಯ ನೂತನ ಶಕೆಯನ್ನು ಆರಂಭಿಸಲು ಹಾಗೂ ತನ್ಮೂಲಕ ಹಲವರಿಗೆ ಉದ್ಯೋಗ ಒದಗಿಸಲು ಮುಂದಾಗುವ ಎಲ್ಲರಿಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಆಕರ್ಷಕ ಸಬ್ಸಿಡಿ ಸಹಿತ ವಿವಿಧ ಸಹಾಯಗಳನ್ನು ಒದಗಿಸಲು ಉತ್ಸುಕವಾಗಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಮಂಜೇಶ್ವರದಲ್ಲಿ ಈ ಮಾಹಿತಿ ಶಿಬಿರ ಆಯೋಜಿಸಿದ್ದು ಸಕಾಲಿಕವಾಗಿದೆಯೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಖಾದಿ ಬೋರ್ಡ್ ನಿರ್ದೇಶಕರಾದ ಸಿ.ಕೆ.ಅನಿಲ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಬಂಧಕಿ ರೇಖಾ, ಲೀಡ್ ಬ್ಯಾಂಕ್ ಪ್ರಬಂಧಕ ರಮಣನ್, ಗ್ರಾ.ಪಂ.ಉಪಾಧ್ಯಕ್ಷೆ ಶಶಿಕಲಾ, ಶಾಂತಿ ಸೇನಾ ಫೌಂಡೇಶನ್ ಟ್ರಸ್ಟಿಗಳಾದ ಉಮ್ಮರ್ ಬೋರ್ಕಳ, ದಿವಾಕರ್ ಎಸ್.ಜೆ ಮತ್ತಿತರರು ಉಪಸ್ಥಿತರಿದ್ದರು. ಪಿ.ಎನ್ ಅಜಯ್ ಕುಮಾರ್ ಯೋಜನೆಯ ಮಾಹಿತಿ ನೀಡಿದರು. ಯೋಜನಾಧಿಕಾರಿ ಗಿರೀಶ್ ಕುಮಾರ್ ಸ್ವಾಗತಿಸಿ, ಸುಭಾಶ್ ವಂದಿಸಿದರು.






