ವಿವೇಕಾನಂದದಲ್ಲಿ ಸಾಮೂಹಿಕ ಹುಟ್ಟುಹಬ್ಬ ಆಚರಣೆ
0
ಮಾರ್ಚ್ 24, 2019
ಪೆರ್ಲ: ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ, ಮಾತೃಪೂಜೆ, ಸಹ ಭೋಜನ, ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಭೋಧನ್ ಪ್ರಮುಖ್ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಮಾತನಾಡಿ, ಇಂದಿನ ವಿದ್ಯಾಭ್ಯಾಸಕ್ಕೂ ನಮ್ಮ ಸಂಸ್ಕೃತಿಗೂ ಸಂಬಂಧವೇ ಇಲ್ಲದಂತಾಗಿದೆ. ಆದರೆ ಇಂತಹ ಶಿಶುಮಂದಿರಗಳು ಇಂದು ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಮಾತ್ರವಲ್ಲದೆ ಉತ್ತಮ ವಿದ್ಯಾಭ್ಯಾಸಕ್ಕೆ ಅಡಿಪಾಯ ಹಾಕಬಲ್ಲ ಕೇಂದ್ರಗಳಾಗಿವೆ. ಮಮ್ಮಿ ಡ್ಯಾಡಿ ಸಂಸ್ಕೃತಿ ನಮ್ಮ ಮಕ್ಕಳಿಗೆ ಬೇಡ. ಮಕ್ಕಳೇ ದೇವರು ಅನ್ನುವ ನಾವೇ ಅವರನ್ನು ರಾಕ್ಷಸರನ್ನಾಗಿ ಮಾಡುವುದು ಸರಿಯೇ? ಎಂದು ಮಾತೆಯರಿಗೆ ಪ್ರಶ್ನಿಸಿದರು. ಎಳವೆಯಲ್ಲಿ ಸಂಸ್ಕøತಿ ಸಂಸ್ಕಾರದ ಜಾಗೃತಿ ಮೂಡಿಸುವ ಕಾರ್ಯಯೋಜನೆಗಳು ಆಗಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಕುಂಕುಮದ ತಿಲಕವಿಟ್ಟು ಆರತಿ ಬೆಳಗಿ ಸಿಹಿ ಹಂಚಿ ಸಾಮೂಹಿಕ ಹುಟ್ಟುಹಬ್ಬ ಆಚರಿಸಲಾಯಿತು. ಮಾತೆಯರ ಕಾಲು ತೊಳೆದು ಹೂ ಕುಂಕುಮ ಇಟ್ಟು ಮಕ್ಕಳು ಮಾತೃಪೂಜೆ ಮಾಡಿದರು. ಮಾತೆಯರಿಗೆ ಅರಸಿನ, ಕುಂಕುಮ ನೀಡಿ ಗೌರವಿಸಲಾಯಿತು.
ಬಳಿಕ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯ ವಾಸುದೇವ ಭಟ್ ಕೋಟೆ ಇವರು ಮಕ್ಕಳಿಗೆ ಬಹುಮಾನ ವಿತರಿಸಿದರು. ನಾಲಂದ ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಕೆ. ಶಿವಕುಮಾರ್ ಹಾಗೂ ವೆಂಕಟ್ರಮಣ ಕಡಬ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಶುಮಂದಿರದ ಸಮಿತಿ ಅಧ್ಯಕ್ಷ ಶ್ರೀಹರಿ ಭರಣೇಕರ್ ಸ್ವಾಗತಿಸಿ, ಭಗಿನಿ ಲಾವಣ್ಯ ಪ್ರಾರ್ಥಿಸಿದರು. ನಳಿನಿ ಸೈಪಂಗಲ್ಲು ನಿರೂಪಿಸಿದರು. ಮಾತೃಮಂಡಳಿ ಅಧ್ಯಕ್ಷೆ ಶ್ಯಾಮಲಾ ಪತ್ತಡ್ಕ ವಂದಿಸಿದರು. ಬಳಿಕ ಸಹಭೋಜನ ನಡೆಯಿತು. ಶಿಶುಮಂದಿರದ ಸಮಿತಿ ಪದಾಧಿಕಾರಿಗಳು, ಮಾತೃಮಂಡಳಿಯ ಸದಸ್ಯೆಯರು, ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಕಾಲೇಜಿನ ಅಧ್ಯಾಪಕ ವೃಂದ ಮತ್ತು ಸಿಬ್ಬಂದಿ, ಶಿಶುಮಂದಿರದ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

