ಪೆರ್ಲ: ಪೆರ್ಲ ಶ್ರೀಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ಪಂಚಾಯತು ಮಟ್ಟದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ವಿಜ್ಞಾನೋತ್ಸವ ಯುರೇಕಾ 2019 ಪರೀಕ್ಷೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಇಂದಿನ ಜನಜೀವನ ವೈಜ್ಞಾನಿಕ ಚಿಂತನೆಯೊಂದಿಗೆ ಹಾಸುಹೊಕ್ಕಾಗಿ ನಿರ್ವಹಿಸಲ್ಪಡುತ್ತಿದೆ. ಇಂದಿನ ಹೊಸ ಚಿಂತನೆಗಳಿಗೆ ಯುವ ತಲೆಮಾರನ್ನು ತೊಡಗಿಸಿಕೊಳ್ಳುವಲ್ಲಿ, ಎಳೆಯರ ಅನ್ವೇಶಣೆ, ಸಂಶೋಧನಾ ಪ್ರವೃತ್ತಿಯನ್ನು ಎಳವೆಯಲ್ಲಿಯೇ ಪೋಶಿಸುವ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರು ಜವಾಬ್ದಾರಿಯುತರಾಗಿ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಅಮೀಗೊ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಕಾರ್ಯದರ್ಶಿ ಜನಾರ್ಧನ, ಶಿಕ್ಷಕಿ ಸುಶೀಲ ಉಪಸ್ಥಿತರಿದ್ದರು. ಎಣ್ಮಕಜೆ ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಸುಮಾರು 55 ಮಕ್ಕಳು ಭಾಗವಹಿಸಿ ವಿಜ್ಞಾನದ ವಿಭಿನ್ನ ಚಟುವಟಿಕೆಯಲ್ಲಿ ಭಾಗವಹಿಸಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಉದಯ ಸಾರಂಗ, ಕಲಂದರ್ ಬೀಬಿ,ಸಂಧ್ಯಾ, ಉಮಾಶಂಕರಿ ತರಗತಿ ನಡೆಸಿದರು. ಉಪಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಪ್ರಮಾಣ ಪತ್ರ ವಿತರಿಸಿ ಈ ಸಂದರ್ಭ ಅಭಿನಂದಿಸಿದರು.
ಉಪ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳ ವಿವರಗಳು:
ಯುರೇಕಾ 2019 ವಿಜ್ಞಾನ ಪರೀಕ್ಷೆಯಲ್ಲಿ ಉಪಜಿಲ್ಲಾ ಮಟ್ಟಕ್ಕೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಬಾಳೆಮೂಲೆ ಶಾಲೆಯ ಸಮೀಕ್ಷಾ, ಪೆರ್ಲ ಕಿರಿಯ ಪ್ರಾಥಮಿಕ ಶಾಲೆಯ ವಿಸ್ಮಿತಾ ಡಿ.ಶೆಟ್ಟಿ, ಬೇಂಗಪದವು ಶಾಲೆಯ ತನ್ವೀ, ಸಾಯ ಶಾಲೆಯ ಸಮನ್ವಿತಾ, ಬೇಂಗಪದವು ಶಾಲೆಯ ಪ್ರಸೀದಾ ಎ.ಕೆ.ನಾಯಕ್ ಆಯ್ಕೆಯಾದರೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪೆರ್ಲ ಶಾಲೆಯ ಆಶಾ ಪಿ., ಕಾಟುಕುಕ್ಕೆ ಹಿರಿಯ ಪ್ರಾಥಮಿಕ ಶಾಲೆಯ ಅನ್ವಿತಾ ಎ.ಎಸ್., ಶೇಣಿ ಶಾಲೆಯ ಯಶ್ವಿತಾ, ಪೆರ್ಲ ಹಿರಿಯ ಪ್ರಾಥಮಿಕ ಶಾಲೆಯ ಶಾಶ್ವತ್ ಆರ್.ಎನ್., ಹಾಗೂ ಕಾಟುಕುಕ್ಕೆ ಹಿರಿಯ ಪ್ರಾಥಮಿಕ ಶಾಲೆಯ ಪೃಥ್ವಿ ಶೆಟ್ಟಿ ಆಯ್ಕೆಯಾಗಿರುವರು.