ಮಂಜೇಶ್ವರ: ಆರಂಭದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿ ಬಳಿಕ ನೆನೆಗುದಿಗೆ ಬಿದ್ದು, ಇದೀಗ ಕೊನೆಗೂ ಮೈಕೊಡವಿ ಎಚ್ಚೆತ್ತಿರುವ ಕೇರಳ ತುಳು ಅಕಾಡೆಮಿ ಹಲವು ಹತ್ತು ಯೋಜನೆಯ ಆಶಯಗಳೊಂದಿಗೆ ಚೇತರಿಕೆಗೊಳ್ಳುತ್ತಿದೆ. ಕೇರಳ ತುಳು ಅಕಾಡೆಮಿ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ತುಳು ಭವನದ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿರುವುದು ಈ ಪೈಕಿ ಪ್ರಮುಖವಾದುದು.
ಸುಮಾರು 2500 ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ತುಳು ಭವನದಲ್ಲಿ ಸಭಾಭವನ, ಕಚೇರಿ, ಗ್ರಂಥಾಲಯ, ಅಧ್ಯಕ್ಷ , ಕಾರ್ಯದರ್ಶಿಗಳ ಕೊಠಡಿ, ಅತಿಥಿಗಳಿಗಾಗಿ ತಂಗಲು ವಿಶೇಷ ಕೊಠಡಿ ಇರಲಿದೆ. ಹೊಸಂಗಡಿ ಸಮೀಪದ ಕಡಂಬಾರು ಗ್ರಾಮದ ದುರ್ಗಿಪಳ್ಳದಲ್ಲಿರುವ ಒಂದು ಎಕರೆ ಪ್ರದೇಶದಲ್ಲಿ ಭವನ ನಿರ್ಮಾಣಗೊಳ್ಳುತ್ತಿದ್ದು, ಎರಡು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಇದರಿಂದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಆಕಾಡೆಮಿ ಕಾರ್ಯಚಟುವಟಿಕೆಗಳಿಗೆ ಹೊಸ ಹುರುಪು ಸಿಕ್ಕಿದೆ. ತುಳು ಜಾನಪದೀಯ ಸಂಸ್ಕೃತಿ, ಕಲೆ, ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಂಡಿದೆ. ತುಳು ಸಂಸ್ಕೃತಿಯ ದನಿಯಾದ ತೆಂಬರೆ ತ್ರೈಮಾಸಿಕದ ಎರಡನೇ ಸಂಚಿಕೆ ಹೊರಬಂದಿದ್ದು, ತುಳು ಭಾಷಿಕ ಸಮುದಾಯದಲ್ಲಿ ಹೊಸ ಆಶಾಭಾವ ಸೃಷ್ಟಿಯಾಗಿದೆ.
ಸಂಸ್ಕೃತಿ, ಭಾಷೆಯ ಕೊಂಡಿಯಂತಿರಲಿರುವ ತುಳು ಅಕಾಡೆಮಿ ಮೂಲಕ ವಿಶೇಷ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ತುಳು ಲಿಪಿ ಬೋಧನೆಯಂತಹ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಮುಂದುವರಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ. ಸಾಲಿಯಾನ್ ತಿಳಿಸಿದ್ದಾರೆ.
ಮಂಜೇಶ್ವರ ಶಾಸಕರಾಗಿದ್ದ ದಿ. ಪಿ.ಬಿ. ಅಬ್ದುಲ್ ರಝಾಕ್ ಅವರ ಶಾಸಕ ನಿಧಿಯಿಂದ ಸುಸಜ್ಜಿತ ಸಭಾಂಗಣದ ನಿರ್ಮಿಸಲಾಗುತ್ತಿದೆ. ಸಭಾಂಗಣ ನಿರ್ಮಾಣಕ್ಕೆ ಅಗತ್ಯವಾದ ಸುಮಾರು 45 ಲಕ್ಷ ರೂ.ಗಳನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸಿ ಸುಸಜ್ಜಿತ ಸಭಾಂಗಣ ಹಾಗೂ ಮ್ಯೂಸಿಯಂ ನಿರ್ಮಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ರು ತಿಳಿಸಿದ್ದಾರೆ.
ತುಳುಭವನ ನಿರ್ಮಾಣಗೊಳ್ಳುತ್ತಿರುವ ದುರ್ಗಿಪಳ್ಳದಲ್ಲಿ ಸೂಕ್ತ ನೀರು ಮತ್ತು ವಿದ್ಯುತ್ ಪೂರೈಕೆ ಮಾಡಲಾಗಿದೆ. ಸುಸಜ್ಜಿತ ಸಾಂಸ್ಕೃತಿಕ ರಂಗಮಂದಿರ ನಿರ್ಮಾಣ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಕಾಸರಗೋಡು ಅಭಿವೃದ್ಧಿ ಯೋಜನೆಯಡಿ ಮಾಜಿ ಸಂಸದ ಪಿ. ಕರುಣಾಕರನ್ ರಂಗ ಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ 1 ಕೋಟಿ ರೂ. ಮೊತ್ತದ ನೆರವನ್ನು ಮೀಸಲಿಡಲು ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ರಂಗಮಂದಿರದ ರೂಪುರೇಷೆ ಪೂರ್ಣಗೊಂಡಲ್ಲಿ ಕಾಮಗಾರಿ ಅರಂಭಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ವಿಜಯವಾಣಿಗೆ ತಿಳಿಸಿದ್ದಾರೆ.
ರಂಗ ಮಂದಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ, ತುಳು ರಂಗಭೂಮಿ, ವಿವಿಧ ಜಾನಪದ ಪ್ರಕಾರಗಳು, ಪಾಡ್ದನ ತತ್ಸಂಬಂಧಿ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ವಾರಕ್ಕೊಂದು ಬಾರಿ ಗ್ರಾಮಸ್ಥರಿಗೆ ತುಳು ಸಿನಿಮಾ ವಿ?ಕ್ಷ ಣೆ, ಸಾಕ್ಷ ??ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ತುಳು ಸಂಸ್ಕೃತಿಯ ಬಗ್ಗೆ ಆಸಕ್ತ ವಿದ್ಯಾರ್ಥಿ ಸಮೂಹದ ಸಂಶೋಧನೆಗೆ ಅನುಕೂಲವಾಗುವಂತೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ತಾಣವಾಗಿ ತುಳುಭವನ ಸಮುಚ್ಚಯ ಮೂಡಿಬರಲಿದೆ.
2007ರಲ್ಲಿ ಅಕಾಡೆಮಿ ಆರಂಭ: ಕಾಸರಗೋಡು ಪ್ರದೇಶದಲ್ಲಿ ತುಳು ಸಂಸ್ಕೃತಿಯ ಉತ್ತೇಜನಕ್ಕಾಗಿ ಕೇರಳ ತುಳು ಅಕಾಡೆಮಿ 2007ರ ಸೆಪ್ಟೆಂಬರ್ನಲ್ಲಿ ಆರಂಭಗೊಂಡಿತ್ತು. ಅಂದಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಉದ್ಘಾಟಿಸಿದ್ದರು. ಅಕಾಡೆಮಿ ಸ್ಥಾಪನೆಯ ಹಿಂದಿನ ಶಕ್ತಿಯಾಗಿದ್ದ ಸಾಹಿತಿ, ಸಂಶೋಧಕ ದಿ.ಡಾ. ವೆಂಕಟರಾಜ ಪುಣಿಂಚಿತ್ತಾಯರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ತುಳುತೇರು ನಾನಾ ಚಟುವಟಿಕೆಗಳೊಂದಿಗೆ ಮುಂಬಯಿ, ತಿರುವನಂತಪುರ ನಗರಗಳಲ್ಲಿ ಅನಾವರಣಗೊಂಡಿತ್ತು. ಅಂದಿನ ಮಂಜೇಶ್ವರ ಶಾಸಕರಾಗಿದ್ದ ಸಿ.ಎಚ್. ಕುಞÂ್ಞಂಬು ಅವರ ಕನಸಿನ ಕೂಸಾದ ಕೇರಳ ತುಳು ಅಕಾಡೆಮಿ ಗರಿಗೆದರಿತ್ತು. 2007ರಿಂದ 3 ವರ್ಷಗಳ ಕಾಲ ಮುಂದುವರಿದಿದ್ದ ಅಕಾಡೆಮಿ ಕಾರ್ಯಚಟುವಟಿಕೆಗಳು ಬಳಿಕ ಸ್ಥಗಿತಗೊಂಡಿತ್ತು.
ಪ್ರಸ್ತುತ 2018 ರಲ್ಲಿ ನೆನೆಗುದಿಗೆ ಬಿದ್ದಿದ್ದ ತುಳು ಅಕಾಡೆಮಿಯ ಸಾರಥ್ಯವನ್ನು ರಂಗ ನಿರ್ದೇಶಕ, ಸಂಘಟಕ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅವರಿಗೆ ವಹಿಸಲಾಯಿತು. ಅವರ ಮುತುವರ್ಜಿಯ ಫಲವಾಗಿ ರೂಪಿಸಿದ ವಿವಿಧ ಯೋಜನೆಯ ಭಾಗವಾಗಿ 2019ರ ಫೆ.28ರಂದು ಕೇರಳ ವಿಧಾನಸಭಾಧ್ಯಕ್ಷ ರಾಮಕೃಷ್ಣನ್ ತುಳುಭವನಕ್ಕೆ ಶಂಕುಸ್ಥಾಪನೆ ಮಾಡಿದ್ದರು.
ಡಾ. ವೆಂಕಟರಾಜ ಪುಣಿಂಚಿತ್ತಾಯರು ತುಳು ಅಕಾಡೆಮಿಯ ಹಿಂದಿನ ಶಕ್ತಿ:
ಕಾಸರಗೋಡಿನಲ್ಲಿ ತುಳು ಅಕಾಡೆಮಿ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾಗಿದ್ದವರು ದಿ. ಡಾ. ವೆಂಕಟರಾಜ ಪುಣಿಂಚಿತ್ತಾಯರು. 2008ರಿಂದ 2012ರ ವರೆಗೆ ಅಕಾಡೆಮಿ ಅಧ್ಯಕ್ಷರಾಗಿದ್ದರು. ತುಳು ಲಿಪಿ ಸಂಶೋಧನೆ ಮೂಲಕ ತುಳು ಭಾಷೆ, ಸಂಸ್ಕೃತಿಗೆ ಹೊಸ ಭಾಷ್ಯ ಬರೆದವರು. ತುಳು ಯಕ್ಷಗಾನ ರಚನೆ ಹಾಗೂ ಸಾಹಿತ್ಯ ರಚನೆಯಲ್ಲೂ ತೊಡಗಿದ್ದರು. ತುಳು ಭಾಷೆಯ ಆದಿಗ್ರಂಥಗಳನ್ನು ಶೋಧಿಸಿ ಶ್ರೀ ಭಾಗವತೋ, ಕಾವೇರಿ, ತುಳು ದೇವಿಮಹಾತ್ಮೆ, ತುಳು ಮಹಾಭಾರತ ಮೊದಲಾದ ತಾಳೆ ಹಸ್ತಪ್ರತಿ ಓದಿ ಅರ್ಥೈಸಿ ತುಳು ಭಾಗ ಜನಾಂಗದವರಿಗೆ ತಿಳಿಯಪಡಿಸಿದ್ದರು. ಉತ್ತಮ ವಾಗ್ಮಿ, ಕವಿ, ಸಾಹಿತಿಯಾಗಿದ್ದ ಇವರು, ತುಳು ಭಾಷಾ ಪಾಂಡಿತ್ಯದೊಂದಿಗೆ ಕನ್ನಡ, ಸಂಸ್ಕೃತ ಭಾಷಾಜ್ಞಾನ, ಸಂಶೋಧನೆಗೆ ಹೊಸ ಮಜಲನ್ನು ಒದಗಿಸಿತ್ತು.
ಅಭಿಮತ:
ತುಳುಭವನಕ್ಕೆ ಅಗತ್ಯ ಕಚೇರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಕಚೇರಿ ಕೆಲಸ ಕಾರ್ಯಗಳಿಗೆ ಅಗತ್ಯ ಸಿಬ್ಬಂದಿ ನೇಮಕವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಕಲೆ, ಸಂಸ್ಕೃತಿ ಸಹಿತ ಸಾಹಿತ್ಯದ ಬಗ್ಗೆ ಪರಿಚಯವುಳ್ಳ ಸಿಬ್ಬಂದಿ ನೇಮಕಗೊಂಡರೆ ತುಳುಭವನದ ಕೆಲಸ ಕಾರ್ಯಗಳು ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ನೆರವಾಗಲಿದೆ.
ತುಳು ಭವನದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ಬಳಿಕ ತುಳುನಾಡಿಗೆ ಲೋಕಾರ್ಪಣೆಗೊಳ್ಳಲಿದೆ. ಬಳಿಕ ತುಳು ಭಾಷೆ, ಸಂಸ್ಕøತಿಯ ಸಮಗ್ರ ಕಾರ್ಯಚಟುವಟಿಕೆಗಳಿಗೆ ಈ ಭವನ ಉಪಯೋಗಪ್ರದವಾಗಲಿದೆ.
- ಉಮೇಶ್ ಎಂ. ಸಾಲಿಯಾನ್, ಅಧ್ಯಕ್ಷ , ಕೇರಳ ತುಳು ಅಕಾಡೆಮಿ.



