ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ವತಿಯಿಂದ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಅ.20ರಂದು ಬೆಳಗ್ಗೆ 10ರಿಂದ ದಸರಾ ನಾಡಹಬ್ಬ-ದೀಪಾವಳಿ ಸಂಭ್ರಮ-2019ನ್ನು ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಎಂ.ಭಾರಿತ್ತಾಯ ದೀಪಜ್ವಲನೆ ಮಾಡಿ ಚಾಲನೆ ನೀಡುವರು. ನಂತರ ಸಮುದಾಯದ ಸದಸ್ಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. ಅನಂತರ ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ಬೆಳ್ಳೂರಿನ ಸುಶಾಂತ್ ಮಾಲೆಂಕಿ ಅವರಿಂದ ಯೋಗ ಪ್ರದರ್ಶನ, ಆಲಂತಡ್ಕದ ಸಾಕ್ಷಿ ಕೇಕುಣ್ಣಾಯರಿಂದ ಭಕ್ತಿಗೀತೆ ಹಾಗೂ ಸುಗಮ ಸಂಗೀತ, ಅಡೂರಿನ ರಾಜಿತಾ ಸರಳಾಯರಿಂದ ವಯಲಿನ್ ವಾದನ, ಪ್ರಮಿತಾ ಭಾರಿತ್ತಾಯ, ಅನನ್ಯಾ ಭಾರಿತ್ತಾಯ, ಪ್ರತಿಮಾ ಭಾರಿತ್ತಾಯ ಶಾಸ್ತ್ರೀಯ ಸಂಗೀತ, ಆದ್ಯಂತ್ ಅಡೂರು ಅವರಿಂದ ತಬಲಾವಾದನ ಮೊದಲಾದ ವಿವಿಧ ಕಾರ್ಯಕ್ರಮಗಳು ಜರುಗಲಿದೆ.
ಅಪರಾಹ್ನ 1.30ರಿಂದ 18 ವರ್ಷದೊಳಗಿನ ಶಿವಳ್ಳಿ ಸಮುದಾಯದ ಮಕ್ಕಳಿಗಾಗಿ ಪುರಾಣ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಅಪರಾಹ್ನ 2.15ರಿಂದ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಯುವ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರ `ಗಾದೆ ಗಮ್ಮತ್ತು- ಭಾಗ 4' ಅಂಕಣ ಬರಹಗಳ ಕೃತಿಯನ್ನು ನಿವೃತ್ತ ಶಿಕ್ಷಕ ಪಣಿಯೆ ಸೀತಾರಾಮ ಕುಂಜತ್ತಾಯ ಬಿಡುಗಡೆ ಮಾಡುವರು. ಕುಂಟಾರು ಶಾಲಾ ಶಿಕ್ಷಕಿ ಸುಮಂಗಲಾ ಎಸ್.ಎನ್.ತಂತ್ರಿ ಕೃತಿ ಪರಿಚಯ ಮಾಡುವರು. ಸಭೆಯಲ್ಲಿ ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಎ. ಶುಭಾಶಂಸನೆ ಮಾಡುವರು. ಈ ಉತ್ಸವದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.

