ಕುಂಬಳೆ: ಕಲೆಯನ್ನು ಸಶಕ್ತವಾಗಿ ಬಳಸಿಕೊಳ್ಳುವ ಕಲೆಗಾರಿಕೆ ಕಲಾವಿದರಲ್ಲಿರಬೇಕು. ಕಲೆ ಕೇವಲ ಮನೋರಂಜನೆಯ ಮಾಧ್ಯಮ ಮಾತ್ರ ಆಗಿರದೆ ರಂಜನೆಯ ಮರೆಯಲ್ಲಿ ಚಿತ್ತ ಪ್ರಚೋದಕಾರಿ ಅಂಶಗಳಿಂದ ಕೂಡಿರುವ ವ್ಯಕ್ತಿತ್ವವನ್ನು ಬೆಳೆಸುವ ಮಾಧ್ಯಮವಾಗಿದೆ ಎಂದು ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅವರು ತಿಳಿಸಿದರು.
ಕೀರ್ತನ ಕುಟೀರ ಅನಂತಪುರದ ಆಶ್ರಯದಲ್ಲಿ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿದ್ದ 11ನೇ ವರ್ಷದ ಹರಿಕೀರ್ತನಾ ಹಬ್ಬ-ಹರಿಕಥಾ ಸಪ್ತಾಹದ ಅಂಗವಾಗಿ ಭಾನುವಾರ ಅಪರಾಹ್ನ ನಡೆದ ಸಮಾರೋಪ-ಕೀರ್ತನ ಕಸ್ತೂರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಹರಿಕಥಾ ಸಂಕೀರ್ತನೆಗಳ ಸ್ಥಾಯೀ ಭಾವ ಭಕ್ತಿ ರಸವಾದರೂ, ಅದರೊಳಗಿನ ದಾಸ ಸಾಹಿತ್ಯ ಮಾನವೀಯ ಮೌಲ್ಯಗಳಿಂದ ಸಮಾಜವನ್ನು ಮುನ್ನಡೆಸುವ ಶಕ್ತಿ ಹೊಂದಿದೆ. ಉತ್ತಮ ವಾಚಿಕಾಭಿನಯ ಮೈಗೂಡಿಸಿಕೊಂಡರೆ ಅತ್ಯುತ್ತಮ ಹರಿದಾಸನಾಗಿ ಜನಮನ್ನಣೆಗೊಳಗಾಗುತ್ತಾನೆ ಎಮದು ಅವರು ತಿಳಿಸಿದರು. ಹರಿಕಥೆ ಮನೋವೈದ್ಯರಂತೆ ಕಾರ್ಯನಿರ್ವಹಿಸುವ ಪರಂಪರೆಯ ಕೊಡುಗೆಯಾಗಿದ್ದು, ಮನುಷ್ಯತ್ವವನ್ನು ನಿರ್ಮಾಣಮಾಡುವ ಕಲೆಯಾಗಿದೆ ಎಂದು ಈ ಸಂದರ್ಭ ತಿಳಿಸಿದರು. ಕೀರ್ತನ ಕುಟೀರದ ಸಾಧನೆಗಳು ಸ್ತುತ್ಯರ್ಹವಾಗಿದ್ದು, ಹೊಸ ತಲೆಮಾರನ್ನು ಸತ್ಪಥದ ಹಾದಿಯಲ್ಲಿ ಕರೆದೊಯ್ಯುವಲ್ಲಿ ದೊಡ್ಡ ಕೊಡುಗೆ ಎಂದು ತಿಳಿಸಿದರು.
ಮಂಗಳೂರಿನ ಹರಿಕಥಾ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ಕೆ.ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಸಂಗೀತ ವಿದ್ವಾಂಸ ಹಾಗೂ ದಾಸ ಸಂಕೀರ್ತನಕಾರ ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು ಅವರಿಗೆ ಕೀರ್ತನ ಕಸ್ತೂರಿ ಪ್ರಶಸ್ತಿ ಪ್ರದಾನಗೈದು ಸನ್ಮಾನಿಸಲಾಯಿತು. ಉದ್ಯಮಿ, ಕೂಟ ಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ, ಉದ್ಯಮಿ ನಾಗೇಶ್ ಕಾರ್ಲೆ ಕೃಷ್ಣ ನಗರ ಉಪಸ್ಥಿತರಿದ್ದು ಶುಭಹಾರೈಸಿದರು. ಕೀರ್ತನ ಕುಟೀರದ ಸಂಚಾಲಕ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿನಂದನಾ ಭಾಷಣ ಮಾಡಿದರು. ಸಪ್ತಾಹದ ಅಧ್ಯಕ್ಷ ತಿರುಮಲೇಶ್ವರ ಭಟ್ ಎಂ. ವಂದಿಸಿದರು. ಸಹ ಸಂಚಾಲಕಿ ವಿಜಯಲಕ್ಷ್ಮೀ ಶಂ.ನಾ.ಅಡಿಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಲಾರತ್ನ ಶಂ.ನಾ.ಅಡಿಗ ಅವರಿಂದ ಸುದಾಮ-ಶ್ಯಾಮ ಹರಿಕಥಾ ಸಂಕೀರ್ತನೆ ನಡೆಯಿತು. ರಾತ್ರಿ 8ಕ್ಕೆ ಮಂಗಲಾಚರಣೆಯೊಂದಿಗೆ ಸಪ್ತಾಹ ಸಮಾರೋಪಗೊಂಡಿತು.



