ಉಪ್ಪಳ: ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಅ. 26 ರಿಂದ 30ರ ತನಕ ಪೈವಳಿಕೆನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿದೆ. ಮಂಜೇಶ್ವರ ಉಪಜಿಲ್ಲೆಯ ವಿವಿಧ ಶಾಲೆಗಳ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗದ ಮಕ್ಕಳು ಭಾಗವಹಿಸುವ ಈ ಕಲೋತ್ಸವದ ಸ್ಪರ್ಧಾ ನೋಂದಾವಣೆ ಮಾಹಿತಿ ತಂತ್ರಜ್ಞಾನದ ಮೂಲಕ ನಡೆದಿದ್ದು ಕಲೋತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ಹಾಗೂ ಉಪಸಮಿತಿಗಳನ್ನು ರೂಪಿಸಲಾಗಿದ್ದು ಇವುಗಳ ಪದಾಧಿಕಾರಿಗಳು ಮತ್ತು ಶಾಲಾ ಶಿಕ್ಷಕ-ರಕ್ಷಕ ವೃಂದ ಅಹರ್ನಿಶಿಯಾಗಿ ದುಡಿಯುತ್ತಿದೆ.
ಅ. 26ರಂದು ವೇದಿಕೆಯೇತರ ಸ್ಪರ್ಧೆಗಳು ನಡೆಯಲಿವೆ. 28 ಸೋಮವಾರ ಪೂರ್ವಾಹ್ನ ಪೈವಳಿಕೆನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಧ್ವಜಾರೋಹಣಗೈಯುವರು. ಬಳಿಕ 10 ರಿಂದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಉದ್ಘಾಟನಾ ಸಮಾರಂಭವು ಜರಗಲಿದೆ. ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮಂಜೇಶ್ವರ ಉಪಜಿಲ್ಲೆಯ ಸಹಾಯಕ ವಿದ್ಯಾಧಿಕಾರಿ ದಿನೇಶ್ ವಿ ಪ್ರಸ್ತಾವಿಕವಾಗಿ ಮಾತನಾಡುವರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಮುಖ್ಯ ಅತಿಥಿಗಳಾಗಿರುವರು. ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು, ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತ ದಿವಾಕರ್, ಪೈವಳಿಕೆ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸುನಿತ ವಾಲ್ಟಿ ಡಿಸೋಜ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರಾ, ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಪುಷ್ಪ ಕೆ.ವಿ, ಡಯಟ್ ಪ್ರಾಂಶುಪಾಲ ಡಾ. ಎಂ ಬಾಲನ್, ಪೈವಳಿಕೆನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಶುಭಾಶಂಸನೆಗೈಯುವರು. ಕಲೋತ್ಸವದ ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕ ವಿಶ್ವನಾಥ ಕೆ ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕಿ ಸುಮಿತ್ರ ಕೆ ವಂದಿಸುವರು.
ಅ.30 ರಂದು ಬುಧವಾರ ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ ಕೆ ಎಂ ಅಶ್ರಫ್ ಇವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ ಬಶೀರ್ ಕಾರ್ಯಕ್ರಮ ಉದ್ಘಾಟಿಸುವರು. ಡಯಟ್ ಕಾಸರಗೋಡಿನ ನಿವೃತ್ತ ಪ್ರಾಂಶುಪಾಲ ಸಿ.ಎಂ. ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿರುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಶಿಕ್ಷಣ ಸ್ಥಾಯಿ ಅಧ್ಯಕ್ಷ ಮೊಹಮ್ಮದ್ ಮುಸ್ತಾಫ, ಪೈವಳಿಕೆ ಗ್ರಾಮ ಪಂಚಾಯತಿ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಟಿ ಅಮೀರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್, ಮಂಜೇಶ್ವರ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಗುರುಪ್ರಸಾದ್ ರೈ, ಪೈವಳಿಕೆನಗರ ಶಾಲೆಯ ಮಾತೃ ಸಂಘದ ಅಧ್ಯಕ್ಷೆ ಎಲಿಝಬೆತ್ ಕ್ರಾಸ್ತಾ ಶುಭಾಶಂಸನೆಗೈಯುವರು. ಸಂಘಟನಾ ಸಮಿತಿಯ ಉಪಸಂಚಾಲಕ ಇಬ್ರಾಹಿಂ ಬುಡ್ರಿಯ ಸ್ವಾಗತಿಸಿ, ಕಾರ್ಯಕ್ರಮ ಸಮಿತಿ ಸಂಚಾಲಕಿ ಶಶಿಕಲ ಕೆ ವಂದಿಸುವರು.

