ಕುಂಬಳೆ: ಗಡಿನಾಡು ಕಾಸರಗೋಡು ತನ್ನ ವ್ಯಾಪ್ತಿ ಪ್ರದೇಶದ ರಂಗಭೂಮಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನ ಕಾರ್ಯಯೋಜನೆಗಳ ಅನುಷ್ಠಾನಗಳಿಗೆ ಅಕಾಡೆಮಿಯ ಮಿತಿಯೊಳಗೆ ಬೆಂಬಲ ನೀಡಲು ಪ್ರಯತ್ನಿಸುತ್ತೇನೆ. ಯುವ ತಲೆಮಾರಿನ ಸಮಗ್ರ ರಂಗಭೂಮಿ ಆಸಕ್ತಿಗೆ ಪೂರಕ ವಾತಾವರಣದ ಹೊಸ ಭೂಮಿಕೆಗೆ ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ನಾಟಕ ಅಕಾಡೆಮಿಯ ನೂತನ ಸದಸ್ಯರಾಗಿ ನಿಯೋಜಿತರಾದ ಎಂ.ಕೆ.ಮಠ ಅವರು ತಿಳಿಸಿದರು.
ಕಲಾವಿದರ ಸಂಘಟನೆಯಾದ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ(ಸವಾಕ್) ನೇತೃತ್ವದಲ್ಲಿ ಬುಧವಾರ ಕಾಸರಗೋಡು ಕೋಟೆಕಣಿ ರಸ್ತೆಯಲ್ಲಿರುವ ಸವಾಕ್ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭ ಕಲಾವಿದರೊಂದಿಗೆ ನಡೆಸಿದ ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಹುಭಾಷಾ ನೆಲೆಯಲ್ಲಿ ಗಡಿನಾಡಿನ ರಂಗಭೂಮಿ ವಿಶಿಷ್ಟವಾದುದು. ತನ್ನ ರಂಗಭೂಮಿ ಪಾದಾರ್ಪಣೆಯ ಬಾಲ್ಯ ಕಾಲದಲ್ಲಿ ತನಗೆ ಅತ್ಯುತ್ತಮ ಬೆಂಬಲ ನೀಡಿದ್ದ ಕಾಸರಗೋಡಿನ ರಂಗ ಚಟುವಟಿಕೆಗಳು ಅತ್ಯಪೂರ್ವವಾದುದು ಎಂದು ಅವರು ನೆನಪಿಸಿದರು. ವರ್ತಮಾನದ ಸಂಕೀರ್ಣ ಪ್ರಪಂಚದಲ್ಲಿ ದಿಕ್ಕೆಡುವ ಭೀತಿಯಲ್ಲಿರುವ ಸಮಾಜವನ್ನು ಸಮರ್ಪಕವಾಗಿ ಮುನ್ನಡೆಸಲು ರಂಗಭೂಮಿಯಿಂದ ಮಾತ್ರ ಸಾಧ್ಯ ಎಂದ ಅವರು, ಯುವ ತಲೆಮಾರನ್ನು ಸುಂದರ ಸಮಾಜದ ಕಾಣ್ಕೆಗಳಾಗಿ ರೂಪಿಸುವಲ್ಲಿ ರಂಗಭೂಮಿಯನ್ನು ವಿಸ್ತರಿಸುವ, ಹೊಸತನಕ್ಕೆ ತೆರೆಸಿಕೊಳ್ಳುವ ಅಗತ್ಯ ಇದ್ದು, ಅಕಾಡೆಮಿಯ ಮಿತಿಯೊಳಗೆ ಗರಿಷ್ಠ ಪ್ರಮಾಣದ ಸಾಧ್ಯತೆಗಳನ್ನು ಕಂಡುಕೊಳ್ಳಲಾಗುವುದೆಂದು ಅವರು ಈ ಸಂದರ್ಭ ತಿಳಿಸಿದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಾಕ್ ಜಿಲ್ಲಾಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಕರ್ನಾಟಕ ನಾಟಕ ಅಕಾಡೆಮಿಯು ಗಡಿನಾಡು ಕಾಸರಗೋಡಿಗೆ ಸಾಕಷ್ಟು ನೆರವನ್ನು ಈ ಹಿಂದೆಯೂ ನೀಡಿದೆ. ಗಡಿನಾಡಿನ ಪುಟ್ಟ ಜಿಲ್ಲೆಯಾದ್ಯಂತ ವಿಸ್ತರಿಸಿರುವ ಹಲವಾರು ಸ್ಥಳೀಯ ನಾಟಕ ಸಂಸ್ಥೆಗಳನ್ನು ಗುರುತಿಸಿ, ಅಗತ್ಯದ ನೆರವು ನೀಡುವ ಮೂಲಕ ನವಚೇತನ ನೀಡುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಬೇಕು ಎಂದರು. ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಉಳಿಸುವಲ್ಲಿ ಗಡಿನಾಡಿನ ರಂಗಭೂಮಿ ಹೆಚ್ಚು ಕ್ರಿಯಾಶೀಲಗೊಳ್ಳಬೇಕಾಗಿದ್ದು, ಸಮರ್ಪಕ ಯೋಜನೆಗಳ ಮೂಲಕ ಕಾರ್ಯಗತಗೊಳಿಸಬಹುದು ಎಂದು ತಿಳಿಸಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಹಿರಿಯ ರಂಗ ಕಲಾವಿದ ಸುಬ್ಬಣ್ಣ ಶೆಟ್ಟಿ, ಥಿಯಾಟ್ರಿಕ್ಸ್ ಸೊಸೈಟಿಯ ಜಿಲ್ಲಾ ಕಾರ್ಯದರ್ಶಿ ಟಿ.ವಿ.ಗಂಗಾಧರನ್, ರಂಗ ಕಲಾವಿದರಾದ ರಘು ಕೆ.ಮೀಪುಗುರಿ, ದಯಾಪ್ರಸಾದ್ ಕೆ.ಎಸ್., ಶಶಿಕುಮಾರ್ ಕುಳೂರು, ಜಯಶ್ರೀ ದಿವಾಕರ್, ಭಾರತೀ ಬಾಬು, ದಿವಾಕರ ಅಶೋಕನಗರ, ಜಯಂತಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ತಾರಾನಾಥ ಮಧೂರು ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.


