ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಕರಾವಳಿ ನಿಗಾ ನಡೆಸುವ ಬೋಟುಗಳ ಗಸ್ತು ಶನಿವಾರ ಆರಂಭಗೊಂಡಿದೆ.
ಕಂದಾಯ-ಪೊಲೀಸ್ ಇಲಾಖೆಗಳು ಜಂಟಿಯಾಗಿ ನಡೆಸುತ್ತಿರುವ ಈ ಕರಾವಳಿ ಬೋಟ್ ಗಸ್ತು ನಾಳೆ(ಅ.21) ಸಂಜೆ 6 ಗಂಟೆ ವರೆಗೆ ಮುಂದುವರಿಯಲಿದೆ. ಮತದಾತರಿಗೆ ಆಮಿಷ ನೀಡುವ ನಿಟ್ಟಿನಲ್ಲಿ ಹಣ, ಮದ್ಯ, ಉಡುಗೊರೆ ಸಹಿತ ವಿಚಾರಗಳನ್ನು ಅಕ್ರಮ ಸಾಗಾಟ, ಕಾನೂನು ವಿರುದ್ಧ ಚಟುವಟಿಕೆ ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಗಸ್ತು ನಡೆಸಲಾಗುತ್ತಿದೆ. ಕುಂಬಳೆಯಿಂದ ಮಂಜೇಶ್ವರ ವರೆಗೆ, ಮಂಜೇಶ್ವರದಿಂದ ತಲಪ್ಪಾಡಿ ಕರಾವಳಿಯಲ್ಲಿ ಎರಡು ಬೋಟುಗಳು ಗಸ್ತು ನಡೆಸುತ್ತಿವೆ. ಕುಂಬಳೆ ಕರಾವಳಿ ಪೊಲೀಸ್ ಠಾಣೆಯಿಂದ ಮೂರು ಪೊಲೀಸರು, ಇಬ್ಬರು ಕಂದಾಯ ಇಲಾಖೆ ಸಿಬ್ಬಂದಿ, ಮೂವರು ಮೀನುಗಾರರು ಸಹಿತ ತಲಾ 8 ಮಂದಿ ಪ್ರತಿ ಬೋಟುಗಳಲ್ಲಿ ಕರ್ತವ್ಯದಲ್ಲಿದ್ದಾರೆ.
ಚಾಲನೆ ಸಮಾರಂಭ:
ಮಂಜೇಶ್ವರ ಕಡಲತೀರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಸುರು ನಿಶಾನೆ ತೋರುವ ಮೂಲಕ ಗಸ್ತಿಗೆ ಚಾಲನೆ ನೀಡಿದರು. ಉಪಚುನಾವಣೆಯ ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ. ಕಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಸಹಾಯಕ ತಹಸೀಲ್ದಾರ್ ರೆಜಿ ಜಾನ್ ಮೊದಲಾದವರು ಉಪಸ್ಥಿತರಿದ್ದರು.


