ಕುಂಬಳೆ: ಅಲ್ಪಸಂಖ್ಯಾತರನ್ನು ಮತ ವೈಷಮ್ಯಗಳ ಮೂಲಕ ಎತ್ತಿಕಟ್ಟುವಲ್ಲಿ ಎಡ-ಬಲ ರಂಗಗಳು ನಿರತವಾಗಿ ಜನವಂಚನೆ ನಡೆಸುತ್ತಿದೆ. ಅವರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎರಡೂ ಒಕ್ಕೂಟಗಳು ವಿಫಲವಾಗಿದೆ ಎಂದು ಮಾಜಿ ಸಂಸದ ಎ.ಪಿ.ಅಬ್ದುಲ್ಲ ಕುಟ್ಟಿ ತಿಳಿಸಿದರು.
ಮಂಜೇಶ್ವರ ಉಪಚುನಾವಣೆಯ ಹಿನ್ನೆಲೆಯಲ್ಲಿ ಕುಂಬಳೆ ಮಾವಿನಕಟ್ಟೆಯಲ್ಲಿರುವ ಎನ್ ಡಿ ಎ ಚುನಾವಣಾ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ ಆರೋಪಿಸಿದರು.
ರಾಜ್ಯದ ಒಟ್ಟು ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಎಲ್ ಡಿ ಎಫ್ ಹಾಗೂ ಯುಡಿಎಫ್ ಪರಸ್ಪರ ಹೊಂದಾಣಿಕೆಯ ಮೂಲಕ ಮತ ವ್ಯಾಪಾರ ನಡೆಸುತ್ತಿದೆ. ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿ.ಕೆ.ಇಬ್ರಾಹಿಂ ಕುಞï್ಞಯನ್ನು ಬಂಧಿಸದೆ ಅವರನ್ನು ಸ್ವತಃ ಮುಖ್ಯಮಂತ್ರಿಯೇ ಸಂರಕ್ಷಿಸುತ್ತಿರುವುದು ಇಂತಹ ರಾಜಕೀಯ ಹೊಂದಾಣಿಕೆಯ ನಗ್ನ ಸತ್ಯವಾಗಿ ನಮ್ಮಿದಿರಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜನಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೇರಳದಲ್ಲಿ ಅವನ್ನು ಅನುಷ್ಠಾನಗೊಳಿಸಲು ಎಡರಂಗ ಮುಂದಾಗದಿರುವುದು ಬಿಜೆಪಿಯ ವರ್ಚಸ್ಸು ಕುಗ್ಗಿಸುವ ಉದ್ದೇಶದಿಂದಾಗಿದೆ. ನರೇಂದ್ರಮೋದಿಯವರ ಜನಪರ ಯೋಜನೆಗಳ ಬಗ್ಗೆ ಕ್ರೈಸ್ತರು ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾದರಿ ಕಾರ್ಯ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ವಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾಕೋಶಾಧಿಕಾರಿ ಜಿ.ಚಂದ್ರನ್ ಉಪಸ್ಥಿತರಿದ್ದರು.


