ಕುಂಬಳೆ: ಹೊಸ ತಲೆಮಾರನ್ನು ಪರಂಪರೆಯ ಬುನಾದಿಯೊಂದಿಗೆ ಮುನ್ನಡೆಸುವ ಹೊಣೆ ನಾಗರಿಕ ಸಮಾಜದ್ದಾಗಿದೆ. ವೇದ-ಪುರಾಣಗಳ ತಿರುಳುಗಳ ಅರಿವಿನ ಕೊರತೆ ಇಂದು ವ್ಯಾಪಕಗೊಂಡಿರುವುದರಿಂದ ನೆಮ್ಮದಿ ಇಲ್ಲವಾಗುತ್ತಿದೆ. ಬೆಳೆಯುವ ಮಕ್ಕಳಿಗೆ ನಾವು ನೀಡುವ ಅರಿವಿನ ಸುಜ್ಞಾನದಿಂದ ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಕೀರ್ತನ ಕುಟೀರದ ಅಹರ್ನಿಶಿ ಚಟುವಟಿಕೆ ಮಾದರಿಯಾದುದು ಎಂದು ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಕೆ.ಜಯರಾಮ ಅಡಿಗ ಅವರು ತಿಳಿಸಿದರು.
ಕುಂಬಳೆ ಅನಂತಪುರದ ಕೀರ್ತನ ಕುಟೀರದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 11ನೇ ವರ್ಷದ ಹರಿಕಥಾ ಸಪ್ತಾಹಹರಿಕೀರ್ತನ ಹಬ್ಬ 2019 ನ್ನು ಸೋಮವಾರ ಸಂಜೆ ಕಣಿಪುರ ಕ್ಷೇತ್ರ ಪರಿಸರದ ಸಭಾಂಗಣದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಪುರಾಣ ಪುರುಷರ, ಘಟನಾವಳಿಗಳ ಒಳನೋಟಗಳನ್ನು ತೆರೆದಿಡುವ, ಸತ್ಪಥದಲ್ಲಿ ಮುನ್ನಡೆಸುವ ಹರಿಕಥಾ ಸತ್ಸಂಗಗಳು ಮನೆ-ಮನಗಳಿಗೆ ವ್ಯಾಪಿಸಬೇಕು. ಸತ್ ಚಿಂತನೆಗಳಿರುವಲ್ಲಿ ಋಣಾತ್ಮಕತೆ ನೆರಳನ್ನೂ ಬೀರದು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಲ್ಲಿ ಕೀರ್ತನ ಕುಟೀರದ ಸಮಗ್ರ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಅವರು ಹಾರೈಸಿದರು.
ಹರಿದಾಸ, ದಾಸ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ, ಸಾಮಾಜಿಕ-ಧಾರ್ಮಿಕ ಮುಂದಾಳು ಅಶೋಕ ಮಾಸ್ತರ್ ಬಾಡೂರು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಇಂದು ಮಕ್ಕಳ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡುತ್ತೇವೆ. ಆದರೆ ಅವರು ತಪ್ಪಿರುವ ಹೆಜ್ಜೆಗಳ ಬಗ್ಗೆ ಗಂಭೀರ ಚಿಂತನೆಗಳು ಆಗದಿರುವುದು ಖೇದಕರ ಎಂದು ತಿಳಿಸಿದರು. ಮಕ್ಕಳಿಗೆ ನಾವು ಏನನ್ನು ನೀಡುತ್ತೇವೆಯೋ ಅದು ಜೀವನದಲ್ಲಿ ಅಳವಡಿಕೆಯಾಗುತ್ತದೆ. ಸತ್ ಚಿಂತನೆಯ ಬೋಧನೆಗಳು, ತರಬೇತಿಗಳು ಭಾರತೀಯತೆಯ ಸಾಕಾರತೆಗೆ ಪೂರಕವಾಗಿ ಯುವ ಮನಸ್ಸುಗಳನ್ನು ಬೆಳೆಸುತ್ತದೆ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರು ಮಾತನಾಡಿ, ಗುಣಾತ್ಮಕ, ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಸಮಾಜ ಪುರಸ್ಕರಿಸಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ ಹರಿಕಥಾ ಸತ್ಸಂಗಗಳು ನಿತ್ಯನಿರಂತರವಾಗಿ ಬೆಳೆದುಬರಬೇಕು ಎಂದು ತಿಳಿಸಿದರು. ಧಾರ್ಮಿಕ ಮುಖಂಡ, ಹರಿಕಥಾ ಪರಿಷತ್ತಿನ ಉಪಾಧ್ಯಕ್ಷ ಶ್ರೀನಿವಾಸ ಭಟ್ ಕಣ್ವತೀರ್ಥ, ಹರಿಕಥಾ ಸಪ್ತಾಹದ ಅಧ್ಯಕ್ಷ ತಿರುಮಲೇಶ್ವರ ಭಟ್ ಎಂ. ಉಪಸ್ಥಿತರಿದ್ದು ಶುಭಹಾರೈಸಿದರು.
ಕೀರ್ತನ ಕುಟೀರದ ಸಂಚಾಲಕ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೀರ್ತನ ಕುಟೀರದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಶಿವರಾಮ ಎನ್. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಮನಾಥ ನಾಯಕ್ ವಂದಿಸಿದರು. ಸಹ ಸಂಚಾಲಕಿ ವಿಜಯಲಕ್ಷ್ಮೀ ಶಂ.ನಾ.ಅಡಿಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೀರ್ತನ ಕುಟೀರದ ವಿದ್ಯಾರ್ಥಿಗಳಾದ ಮಾ.ಸ್ಕಂದ ಪ್ರಸಾದ್ ಹಾಗೂ ಕು.ಚೈತ್ರ ಅಡೂರು ಅವರಿಂದ ಹರಿಕಥಾ ಸತ್ಸಂಗ ನಡೆಯಿತು. ಬಳಿಕ ಹುಬ್ಬಳ್ಳಿಯ ನಾಗರತ್ನ ವಿನಾಯಕ ಜೋಶಿ ಅವರಿಂದ ಶ್ರೀಕೃಷ್ಣ ಸಂಧಾನ ಆಖ್ಯಾಯಿಕೆಯ ಕಥಾ ಸಂಕೀರ್ತನೆ ನಡೆಯಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ ಹಾಗೂ ಜಗದೀಶ ಉಪ್ಪಳ ಸಹಕರಿಸಿದರು.
ಇಂದು(ಅ.16) ಸಂಜೆ 4ರಿಂದ 5.30ರ ವರೆಗೆ ವಿದ್ಯಾರ್ಥಿಗಳಾದ ವೇದಾಂಶು, ಬೇಬಿ ಲಿಖಿತ, ಚೈತನ್ಯ, ಅರುಣ, ಸುಸ್ರೀತ ಅವರಿಂದ ರಂಗಪ್ರವೇಶ ನಡೆಯಲಿದೆ. ಬಳಿಕ 6.30 ರಿಂದ 8ರ ವರೆಗೆ ಶ್ರೀಶವಿಠಲದಾಸ ಚೆನ್ನರಾಯಪಟ್ಟಣ ಅವರಿಂದ ಬಲಿ-ವಾಮನ ಕಥಾ ಸಂಕೀರ್ತನೆ ನಡೆಯಲಿದೆ.



