ಕಾಸರಗೋಡು: ವಾಹನ ತಪಾಸಣೆಯಲ್ಲಿ ಲೋಪ ನಡೆಸಿದ ಆರೋಪದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡದ ಸಿಬ್ಬಂದಿಯೊಬ್ಬರನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕರ್ತವ್ಯದಿಂದ ಅಮಾನತು(ಸ್ಪೆಂಡ್)ಗೊಳಿಸಿದ್ದಾರೆ.
ತಲಪ್ಪಾಡಿಯಲ್ಲಿ ನಡೆಸಿದ ಮಿಂಚಿನ ದಾಳಿಯಲ್ಲಿ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ. ಅ.15ರಿಂದ ಮಂಜೇಶ್ವರ ವಿಧಾನಸಭೆ ಕ್ಷೇತ್ರಕ್ಕಿರುವ 17 ಪ್ರವೇಶ ಜಾಗಗಳಲ್ಲಿ ವಾಹನ ತಪಾಸನೆ ಕಡ್ಡಾಯಗೊಳಿಸಿ ಆದೇಶ ನೀಡಲಾಗಿತ್ತು. ಇದಕ್ಕಾಗಿ 17 ಎಂಟ್ರಿ ಪಾಯಿಂಟ್ ಗಳಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಡವನ್ನುನೇಮಕಗೊಳಿಸಲಾಗಿತ್ತು. ಕರ್ನಾಟಕ ಸಹಿತ ಇತರ ರಾಜ್ಯಗಳಿಂದ 7 ಕ್ಕಿಂತ ಅಧಿಕ ಮಂದಿ ವಾಹನವೊಂದರಲ್ಲಿ ಆಗಮಿಸುವುದಿದ್ದರೆ ಗುರುತು ಚೀಟಿ ಸಹಿತ ದಾಖಲೆಗಳನ್ನು ತಪಾಸಣೆ ನಡೆಸಿ, ಅಗತ್ಯವಿದ್ದರೆ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಈ ವಿಚಾರದಲ್ಲಿ ಖಚಿತತೆ ನಡೆಸುವ ನಿಟ್ಟಿನಲ್ಲಿ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನಡೆಸಿದ್ದ ಮಿಂಚಿನ ದಾಳಿಯಲ್ಲಿ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

