ಪೆರ್ಲ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ರೀತಿಯ ವಿಶಿಷ್ಟ ಪ್ರತಿಭೆ ಅಡಕವಾಗಿದೆ. ಆ ಪ್ರತಿಭೆಗಳು ತನ್ನಲ್ಲಿ ಅಡಕವಾಗಿದೆ ಎಂದು ತಿಳಿಯಲು ಸಾಧ್ಯವಾಗದ ಕಾರಣ ಅವುಗಳು ಸುಪ್ತವಾಗಿಯೇ ಇರುತ್ತದೆ. ಪ್ರತಿಭೆಗಳ ಪ್ರದರ್ಶನಕ್ಕೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ ಆ ಪ್ರತಿಭೆಗಳು ಅನಾವರಣಗೊಳ್ಳುತ್ತದೆ ಎಂದು ನಾಲಂದ ಕಾಲೇಜು ಆಡಳಿತ ಮಂಡಳಿ ಆಹ್ವಾನಿತ ಗೌರವ ಸಲಹೆಗಾರ, ನಾಲಂದ ಟ್ರಸ್ಟ್ ಅಧ್ಯಕ್ಷ ಕಜಂಪಾಡಿ ಸುಬ್ರಮಣ್ಯ ಭಟ್ ಹೇಳಿದರು.
ಹೈಯರ್ ಸೆಕೆಂಡರಿ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಪೆರ್ಲ ನಾಲಂದ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 'ಟೆಲೆಂಟ್ಸ್ ಹಂಟ್ 2ಕೆ20' ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ನೌಕರ ಸಂಘದ ಕಾರ್ಯದರ್ಶಿ, ಕನ್ನಡ ಉಪನ್ಯಾಸಕ ಕೇಶವ ಶರ್ಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಪ್ತ ಪ್ರತಿಭೆಗಳು ಸುಪ್ತವಾಗಿಯೇ ಇದ್ದಲ್ಲಿ ನಮ್ಮನ್ನು ನಾವು ಎಲ್ಲಿಯೂ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ದೊರೆತಾಗ ಯಾವುದೇ ಭಯ, ಆತಂಕ, ಹಿಂಜರಿಕೆ ಇಲ್ಲದೇ ಪ್ರತಿಭೆ ಪ್ರದರ್ಶಿಸಲು ಮುಂದಾಗಬೇಕು ಎಂದರು.
ಕಾಲೇಜು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿಷ್ಣುಮೂರ್ತಿ, ಕಾಲೇಜು ಯೂನಿಯನ್ ಅಧ್ಯಕ್ಷೆ ರಶ್ಮಿ ಕೆ. ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ, ವಾಣಿಜ್ಯ ಹಾಗೂ ಆಡಳಿತ ಅಧ್ಯಯನ ವಿಭಾಗದ ಉಪನ್ಯಾಸಕ ಸುರೇಶ್ ಕೆ. ಎಂ. ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತಾ ವಂದಿಸಿದರು. ಹಿಂದಿ ಉಪನ್ಯಾಸಕಿ ಶಾಂಭವಿ ನಿರೂಪಿಸಿದರು.


