ಮಂಜೇಶ್ವರ: ಕೋವಿಡ್ 19 ವೈರಸ್ ಭೀತಿಯ ಕಾರಣ ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪ್ಪಾಡಿಯ ಅಂತರ್ ರಾಜ್ಯ ರಸ್ತೆ(ರಾ.ಹೆದ್ದಾರಿ) ಸಂಪೂರ್ಣ ಸಂಚಾರ ನಿಷೇಧದ ಬಳಿಕ ಉಂಟಾದ ತುರ್ತು ಚಿಕಿತ್ಸಾ ಸೌಕರ್ಯದ ಕೊರತೆಯಿಂದ ಮೃತರಾದವರ ಸಂಖ್ಯೆ ಸೋಮವಾರ ಸಂಜೆ ಮೂರಕ್ಕೇರಿದೆ. ಸೋಮವಾರ ಮಂಗಳೂರಿನ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಕುಂಜತ್ತೂರು ನಿವಾಸಿ ಮಾಧವ(45) ಮೃತರಾದರು. ಉದರ ಸಂಬಂಧಿ ಅನಾರೋಗ್ಯಕ್ಕೊಳಗಾಗಿದ್ದರು.
ಮಾಧವ ಅವರು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆಯಲ್ಲಿದ್ದರು. ಸೋಮವಾರ ರೋಗ ಉಲ್ಬಣಗೊಂಡ ಕಾರಣ ಮಂಗಳೂರು ಅಥವಾ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ನಿರ್ದೇಶಿಸಿದ್ದರು. ಬಳಿಕ ಮಂಗಳೂರಿಗೆ ಕರೆದೊಯ್ಯಲು ತಲಪ್ಪಾಡಿಗೆ ಆಗಮಿಸುತ್ತಿರುವಂತೆ ಪೋಲೀಸರು ತಡೆದರು. ಅನ್ಯ ದಾರಿಗಳಿಲ್ಲದೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯತ್ತ ತೆರಳುವ ಮಧ್ಯೆ ಮಾಧವ ಕೊನೆಯುಸಿರೆಳೆದರು. ಕೂಲಿ ಕೆಲಸ ಕಾರ್ಮಿಕರಾದ ಮಾಧವ ಅವರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.