ಬದಿಯಡ್ಕ/ಪೆರ್ಲ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ವ್ಯಾಪಕ ನಿರ್ಬಂಧಗಳು ಜಾರಿಗಳು ಬರುತ್ತಿರುವಂತೆ ಪ್ರಕೃತಿಯಲ್ಲಿ ವ್ಯಾಪಕ ಬದಲಾವಣೆಗಳೂ ಕಾಣ ತೊಡಗಿದೆ.
ದಿನನಿತ್ಯ ವಾಹನಗಳ ದಟ್ಟಣೆ, ಹಾರ್ನ್, ಗಿಜಿಗುಟ್ಟುವ ಜನಜಂಗುಳಿಗಳು ಸಂಪೂರ್ಣ ನಿಯಂತ್ರಿಸಲ್ಪಟ್ಟು ನಿಶ್ಚಬ್ದ ವಾತಾವರಣ ಎಲ್ಲೆಡೆ ಕಂಡುಬರುತ್ತಿದೆ. ಸೋಮವಾರ ಕಾಸರಗೋಡು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದ್ದರೂ ಬೆಳಿಗ್ಗೆ 11 ರಿಂದ ಸಂಜೆ 5ರ ವರೆಗೆ ಜೀವನಾವಶ್ಯಕ ಸಾಮಗ್ರಿಗಳ ಕೊಂಡುಕೊಳ್ಳುವಿಕೆಗೆ ಅವಕಾಶವಾಗುವಂತೆ ಮೆಡಿಕಲ್, ಹಾಲು, ದಿನಸಿ ಅಂಗಡಿಗಳನ್ನು ಪೋಲೀಸ್ ಕಾವಲುಗಳಲ್ಲಿ ತೆರೆಯಲಾಗಿರುವುದು ಕಂಡುಬಂತು. ಅಂಗಡಿಗಳು ತೆರೆದುಕೊಳ್ಳುತ್ತಿರುವಂತೆ ಜನರು ಮುಗಿಬಿದ್ದು ಸಾಮಗ್ರಿಗಳನ್ನು ಖರೀದಿಸಲು ತೊಡಗಿದ್ದರು. ಪೋಲೀಸರ ನಿರ್ದೇಶಾನುಸಾರ ಅಂತರ ಕಾಯ್ದುಕೊಂಡು ಕೆಲವು ಕಡೆ ವಸ್ತುಗಳ ಖರೀದಿಗೆ ಸೂಚಿಸಲಾಯಿತು.
ವಿಚಿತ್ರ ಕಾಣುವ ಪರಿಸರ:
ನಿರ್ಬಂಧಗಳು ಜಾರಿಗೊಳ್ಳುತ್ತಿರುವಂತೆ ಜನನಿಬಿಡತೆ ಕುಸಿದಿರುವ ಕಾರಣ ರಸ್ತೆ ಸಹಿತ ವಿವಿಧೆಡೆ ಹಸು, ನಾಯಿ, ಹಕ್ಕಿಗಳು ಓಡೋಡಿ ಬಂದು ಆಶ್ರಯಿಸಿರುವುದು ಕಂಡುಬಂತು. ನಮ್ಮ ಪರಿಸರವನ್ನು ಆಕ್ರಮಿಸಿರುವ ಓ ಮಾನವನೇ ಇಂದು ಮತ್ತೆ ನಮ್ಮದು ಲಭ್ಯವಾಗುವ ಸಂದರ್ಭ ಒದಗಿತಲ್ಲಾ ಎಂಬ ಭಾವ ಇರುವಂತೆ ಕಂಡುಬಂತು.
ಈ ಮಧ್ಯೆ ನಾಯಿ, ಹಕ್ಕಿಗಳು ಆಹಾರಗಳು ಲಭ್ಯವಾಗದೆ ಮನೆಯಂಗಳಕ್ಕೂ ಆಗಮಿಸುವುದು ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಸಾಮಾನ್ಯವಾಗಿ ಕಾಗೆ ಮತ್ತು ಇತರ ಪಕ್ಷಿಗಳು ಹಲವು ವರ್ಷಗಳಿಂದ ಕೆಲವು ಪ್ರದೇಶಗಳಲ್ಲಿ ಅಪೂರ್ವವಾಗಿದ್ದವು. ಆದರೆ ಇದೀಗ ಕಾಗೆ, ಹಕ್ಕಿಗಳು ಆಹಾರ ಅರಸಿ ಮನೆಯಂಗಳಕ್ಕೆ ಆಗಮಿಸುತ್ತಿವೆ.
(ಚಿತ್ರ ಮಾಹಿತಿ: ಪೆರ್ಲದ ಹಿರಿಯ ಸಾಹಿತಿ ಹರೀಶ್ ಪೆರ್ಲ ಅವರು ಮನೆಯಂಗಳದಲ್ಲಿ ಹಾರಿಬಂದ ಕಾಗೆಯೊಂದು ಆಹಾರಕ್ಕೆ ಕಾಯುತ್ತಿರುವುದು.)


