ಮಂಜೇಶ್ವರ/ಪೆರ್ಲ: ವ್ಯಾಪಕ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಗಡಿ ಜಿಲ್ಲೆಯ ಕಾಸರಗೋಡಿನ ಅಂತರ್ ರಾಜ್ಯ ಗಡಿಗಳನ್ನು ಶನಿವಾರದಿಂದಲೇ ಸಂಪೂರ್ಣ ಮುಚ್ಚಲಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರವೊಂದೇ ದಿನ 6 ಮಂದಿ ಸೋಂಕಿತರ ಪತ್ತೆಯಾದ ಬೆನ್ನಿಗೇ ಜಿಲ್ಲಾಡಳಿತ ಸಮರೋಪಾದಿಯ ಕಾರ್ಯಾಚರಣೆಗಿಳಿದಿದ್ದು ಅನಗತ್ಯವಾಗಿ ಜನರು ಮನೆಯಿಂದ ಹೊರಗಿಳಿಯುವುದನ್ನು ನಿಬರ್ಂಧಿಸಲಾಗಿದೆ. ಶನಿವಾರ ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೆ ಮಾತ್ರ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಬೇಕೆಂದು ಶುಕ್ರವಾರವೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ಬಹುತೇಕ ಕಡೆಗಳಲ್ಲಿ ವ್ಯಾಪಾರಿಗಳು ಬೆಳಿಗ್ಗೆ ಎಂದಿನಂತೆ ಅಂಗಡಿಗಳು ತೆರೆದಿರುವುದನ್ನು ಗಮನಿಸಿ ಸ್ವತಃ ಜಿಲ್ಲಾಧಿಕಾರಿಗಳೇ ಕಾರ್ಯಾಚರಣೆಗಿಳಿದು ಕಡ್ಡಾಯವಾಗಿ 11ರ ವರೆಗೆ ಬಂದ್ ಮಾಡುವಂತೆ ನಿರ್ದೇಶಿಸಿದರು.
ರಾಷ್ಟ್ರ ಪ್ರಧಾನಿಗಳು ಭಾನುವಾರ ರಾಷ್ಟ್ರ ವ್ಯಾಪಿ ಕರೆನೀಡಿರುವ ಜನತಾ ಕಪ್ರ್ಯೂ ಹಿನ್ನೆಲೆಯಲ್ಲಿ ಶನಿವಾರ ಸಾರ್ವಜನಿಕ ವಿತರಣಾ ಕೇಂದ್ರ, ಪೆಟ್ರೋಲ್ ಪಂಪ್, ದಿನಸಿ-ತರಕಾರಿ ಅಂಗಡಿಗಳಲ್ಲಿ ವ್ಯಾಪಕ ಜನಜಂಗುಳಿ ಕಂಡುಬಂತು. ಕುಂಬಳೆ ಪೇಟೆಯ ಅಂಗಡಿಗಳಲ್ಲಿ ನೆರೆದಿದ್ದ ಜನರನ್ನು ಪೋಲೀಸರು ಗದರಿಸಿ ಕಳಿಸಿದರು. ಶನಿವಾರ ಅಪರಾಹ್ನ ಎಲ್ಲೆಡೆ ಜನ ಸಂಚಾರ ಕಡಿತಗೊಂಡು ಬಂದ್ ವಾತಾವರಣ ನಿರ್ಮಾಣವಾಯಿತು. ಶನಿವಾರ ಬೆಳಿಗ್ಗೆ 10ರ ಬಳಿಕ ಖಾಸಗೀ, ಸರ್ಕಾರಿ ಬಸ್ ಗಳ ಸಂಚಾರ ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು.
ಗೇಟ್ ಬಂದ್:
ಕಾಸರಗೋಡಿನಲ್ಲಿ ಏರಿಕೆ ಕಂಡಿರುವ ಸೋಂಕಿತರ ಹಿನ್ನೆಲೆಯಲ್ಲಿ ವ್ಯಾಪಕಗೊಳ್ಳದಂತೆ ಅಂತರ್ ರಾಜ್ಯ ಗಡಿಗಳನ್ನು ಮುಚ್ಚಲಾಯಿತು. ಆರಂಭದಲ್ಲಿ ಆನೆಕಲ್ಲು ಮಂಜೇಶ್ವರ, ಸಾರಡ್ಕ, ಪಾಣಾಜೆ, ಸ್ವರ್ಗ, ಕಾಟುಕುಕ್ಕೆ, ಕೊಟ್ಯಾಡಿ-ಗಾಳಿಮುಖ, ಬಾಯಾರು ಮುಳಿಗದ್ದೆ, ಕುರುಡಪದವು-ಸುಂಕದಕಟ್ಟೆ, ಬೇಡಗುಡ್ಡೆ, ಸುಳ್ಯಪದವು-ನೆಟ್ಟಣಿಗೆ ರೂಟ್ ಗಳಲ್ಲಿ ಗೇಟ್ ಹಾಕಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಮಧ್ಯಾಹ್ನ ವರೆಗೆ ರಾ.ಹೆದ್ದಾರಿ ತಲಪಾಡಿಯಲ್ಲಿ ತಪಾಸಣೆಯ ಮೂಲಕ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನದ ಬಳಿಕ ಹೆದ್ದಾರಿ ಸಂಚಾರವನ್ನೂ ನಿಯಂತ್ರಿಸಲಾಯಿತು.
ಜಾಗೃತಿ ಪ್ರಕಟಣೆ:
ಜನಸಂಚಾರದ ಜಾಗ್ರತೆಗಾಗಿ ಎಲ್ಲಾ ಪಂಚಾಯತುಗಳಲ್ಲೂ ಸ್ಥಳೀಯಾಡಳಿತ ಸಂಸ್ಥೆ, ಆರೋಗ್ಯ ಇಲಾಖೆ ಮತ್ತು ಪೋಲೀಸರ ನೇತೃತ್ವದಲ್ಲಿ ಜೀಪುಗಳ ಮೂಲಕ ಮೈಕ್ ಬಳಸಿ ಅಲ್ಲಲ್ಲಿ ಜಾಗೃತಿ ಸೂಚನೆಗಳ ರವಾನೆ ನಡೆಸಲಾಯಿತು. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9ರ ವರೆಗೆ ಮನೆಯಿಂದ ಹೊರಬಾರದಂತೆ ಸೂಚಿಸಲಾಯಿತು.

