ಬದಿಯಡ್ಕ: ಬದಿಯಡ್ಕ ಪೇಟೆಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಸಂಚರಿಸುವ ಜಿಲ್ಲಾ ಪಂಚಾಯಿತಿ ರಸ್ತೆಯು ಡಾಮರೀಕರಣಗೊಂಡು ಸಾರ್ವಜನಿಕರಿಗೆ ಸುಗಮ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಕಾಮಗಾರಿ ನಡೆಯುವ ಸಲುವಾಗಿ ಕಳೆದ ಕೆಲವು ದಿನಗಳಿಂದ ರಸ್ತೆ ಸಂಚಾರವನ್ನು ನಿಲುಗಡೆಗೊಳಿಸಲಾಗಿತ್ತು.
ಕಾಸರಗೋಡು ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಬರುವ ಈ ರಸ್ತೆಯು ಅಭಿವೃದ್ಧಿಗೊಂಡಿರುವುದರಿಂದ ಊರವರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದ ಈ ರಸ್ತೆಯು ಡಾಮರೀಕರಣಗೊಳ್ಳುವುದರೊಂದಿಗೆ ವಿವಿಧೆಡೆಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಯಿತು. ಕೊಲ್ಲಂಗಾನ, ಮಾನ್ಯ, ತಲ್ಪಣಾಜೆ, ಪಟ್ಟಾಜೆ ಮೊದಲಾದೆಡೆಗಳಿಂದ ಬದಿಯಡ್ಕಕ್ಕೆ ಈ ದಾರಿಯು ಅತೀ ಹತ್ತಿರದ ದಾರಿಯಾಗಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಗ್ರಾಮದೇವಸ್ಥಾನವಾಗಿದ್ದು, ದಿನನಿತ್ಯ ಅನೇಕ ಭಕ್ತಾದಿಗಳು ಕ್ಷೇತ್ರಕ್ಕೆ ತೆರಳುತ್ತಾರೆ. ಕಾರಣಿಕ ಕುಟ್ಟಿಚ್ಚಾತನ ವಿಶೇಷ ಸಾನ್ನಿಧ್ಯವೂ ಶ್ರೀಕ್ಷೇತ್ರದಲ್ಲಿರುವುದರಿಂದ ಊರ ಪರವೂರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪರಿಸರ ಪ್ರದೇಶದ ಶಾಲೆಗಳಿಗೆ ತೆರಳಲು ಶಾಲಾ ವಾಹನಗಳೂ ಈ ರಸ್ತೆಯನ್ನೇ ಅವಲಂಬಿಸಿವೆ.
ಈ ರಸ್ತೆ ಡಾಮರೀಕರಣಕ್ಕಾಗಿ 10 ಲಕ್ಷ ರೂಪಾಯಿಯನ್ನು ಅನುದಾನವನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ತಿಳಿಸಿದ್ದಾರೆ. ಕಾಮಗಾರಿಯ ವೀಕ್ಷಣೆಗಾಗಿ ಅವರು ಬುಧವಾರ ಪೆರಡಾಲಕ್ಕೆ ಆಗಮಿಸಿದ್ದರು. ಇದಲ್ಲದೆ ಬದಿಯಡ್ಕ, ಚೆಂಗಳ, ಬೆಳ್ಳೂರು ಪಂಚಾಯಿತಿಗಳ ಕೆಲವು ರಸ್ತೆಗಳಿಗೆ ಹಣ ಮಂಜೂರು ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ನೇತಾರರಾದ ಈಶ್ವರ ಮಾಸ್ತರ್ ಪೆರಡಾಲ, ಡಿ.ಶಂಕರ, ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಈಶ್ವರಚಂದ್ರ ಪ್ರಸಾದ್ ಕುಳಮರ್ವ, ರಾಜೇಶ್ ರೈ ಬದಿಯಡ್ಕ, ಸ್ಥಳೀಯರಾದ ವೆಂಕಟೇಶ್ವರ ಭಟ್ ಪಟ್ಟಾಜೆ ಮೊದಲಾದವರು ಜೊತೆಗಿದ್ದರು.
ಅಭಿಮತ:
ವಿದ್ಯಾನಗರ ಮಾನ್ಯ ತನಕ ಈಗಾಗಲೇ ಮೆಕ್ಕಡಾಂ ಡಾಮರೀಕರಣಗೊಳಿಸಲಾಗಿದೆ. ಮಾನ್ಯದಿಂದ ನೀರ್ಚಾಲು ತನಕ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಪ್ರಕಾರ ರಸ್ತೆ ನಿರ್ಮಾಣವಾಗಲಿದೆ. ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕದ ತನಕ 2.30ಕೋಟಿ ರೂಪಾಯಿ ವೆಚ್ಚದಲ್ಲಿ ರೀಟಾರಿಂಗ್ ಕಾಮಗಾರಿ ಆರಂಭಗೊಂಡಿದೆ.
- ನ್ಯಾಯವಾದಿ ಕೆ.ಶ್ರೀಕಾಂತ್, ಜಿಲ್ಲಾ ಪಂಚಾಯಿತಿ ಸದಸ್ಯ


