ಬದಿಯಡ್ಕ: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ವೇಗದಲ್ಲಿ ಹರಡುತ್ತಿರುವುದರಿಂದ ಕಂಗೆಟ್ಟ ಕರ್ನಾಟಕ ಸಹಿತ ಅನ್ಯರಾಜ್ಯ ಕಾರ್ಮಿಕರು ತಮ್ಮ ಊರಿಗೆ ವಾಪಸಾಗುತ್ತಿದ್ದಾರೆ. ಇದರಿಂದಾಗಿ ಹೊಟೇಲ್, ನಿರ್ಮಾಣ ವಲಯ ಸ್ತಬ್ದಗೊಳ್ಳ ತೊಡಗಿದೆ.
ಅನ್ಯರಾಜ್ಯ ಕಾರ್ಮಿಕರು ಮರಳುತ್ತಿರುವ ಜತೆಗೆ ವ್ಯಾಪಾರವೂ ಕಡಿಮೆಯಾಗುವುದರೊಂದಿಗೆ ಹೊಟೇಲ್ ವಲಯ ಭಾರೀ ಸಂದಿಗ್ಧತೆಯಲ್ಲಿ ಸಿಲುಕಿದೆ. ಕೆಲವು ಹೊಟೇಲ್ಗಳನ್ನು ತಾತ್ಕಾಲಿಕವಾಗಿ ಮುಚ್ಚುಗಡೆಗೊಳಿಸಲಾಗಿದೆ.
ನೇಪಾಲ, ಪಶ್ಚಿಮಬಂಗಾಳ, ಕರ್ನಾಟಕ ರಾಜ್ಯಗಳ ಕಾರ್ಮಿಕರನ್ನು ಆಶ್ರಯಿಸಿಯೇ ಬಹುತೇಕ ಹೊಟೇಲ್ಗಳು ಕಾರ್ಯಾಚರಿಸುತ್ತವೆ. ದೇಶದಲ್ಲಿ ಕೊರೊನಾ ಮೊದಲು ದೃಢಗೊಂಡಿರುವ ಕೇರಳದಿಂದ ಅನ್ಯರಾಜ್ಯ ಕಾರ್ಮಿಕರು ಮರಳಲು ಕಾರಣವಾಗಿದೆ.
ನಗರ-ಗ್ರಾಮ ವ್ಯತ್ಯಾಸವಿಲ್ಲದೆ ಎಲ್ಲಾ ಹೊಟೇಲ್ಗಳು ಭಾನುವಾರ-ಸೋಮವಾರ ಸಂಪೂರ್ಣ ಮುಚ್ಚುಗಡೆಗೊಂಡಿದೆ. ಜೊತೆಗೆ ಮಾ.31ರ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ವ್ಯಾಪಾರ ಸಂಸ್ಥೆ, ಹೋಟೆಲ್ ಗಳು ಕಾರ್ಯಾಚರಿಸದಿರುವುದರಿಂದ ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗಿದೆ. ಕಾರ್ಮಿಕರ ವೇತನ, ಕಟ್ಟಡ ಬಾಡಿಗೆ, ವಿದ್ಯುತ್ ದರ, ತೆರಿಗೆ ಎಂಬಿವುಗಳಿಗೆ 40 ಶೇಕಡಾ, ಮತ್ತಿತರ ಸಾಮಗ್ರಿಗಳಿಗೆ 50 ಶೇ. ಮೊತ್ತ ವ್ಯಯಿಸುವಾಗ ಉಳಿದ ಶೇ.10 ಮಾತ್ರವೇ ಮಾಲಕರಿಗೆ ಲಾಭವಾಗಿ ಸಿಗುತ್ತದೆ.
ಅನ್ಯರಾಜ್ಯ ಕಾರ್ಮಿಕರು ಮರಳಿರುವುದು ಕಟ್ಟಡ ನಿರ್ಮಾಣ ವಲಯಕ್ಕೂ ಪ್ರತಿಕೂಲವಾಗಿ ಪರಿಣಮಿಸಿದೆ. ಬಹುತೇಕ ಕಡೆಗಳಲ್ಲೂ ಅನ್ಯರಾಜ್ಯ ಕಾರ್ಮಿಕರನ್ನು ಬಳಸಿ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ.

