ನವದೆಹಲಿ: ತವರಿಗೆ ಮರಳಲಾಗದೆ ಇಟಲಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಭಾರತೀಯರ ರಕ್ಷಣೆಗೆ ಧಾವಿಸಿರುವ ಕೇಂದ್ರ ಸರ್ಕಾರ, ಇದೀಗ ವೈದ್ಯರ ತಂಡವೊಂದನ್ನು ಭಾರತೀಯರಿರುವ ಸ್ಥಳಕ್ಕೆ ರವಾನಿಸಲು ಮುಂದಾಗಿದೆ.
ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಸುಮಾರು 300 ಭಾರತೀಯರು ಇಟಲಿಯಲ್ಲಿ ಪರದಾಡುತ್ತಿದ್ದು, ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಇದ್ದಾರೆಂದು ಹೇಳಲಾಗುತ್ತಿತ್ತು. ಕೊರೋನಾ ಪೀಡಿತ ಇರಾನ್ ಹಾಗೂ ಇಟಲಿಯಿಂದ ಭಾರತಕ್ಕೆ ಮರಳಬೇಕು ಎಂದರೆ, ಕೊರೋನಾಪೀಡಿತರಲ್ಲ ಎಂಬ ನೆಗೆಟಿವ್ ಸರ್ಟಿಫಿಕೇಟನ್ನು ಇಟಲಿ ಹಾಗೂ ಇರಾನ್ನಲ್ಲಿ ತಪಾಸಣೆ ಮಾಡಿಸಿಕೊಂಡು ತರಬೇಕು. ಆಗ ಮಾತ್ರ ಅವರಿಗೆ ಭಾರತದ ವಿಮಾನ ಹತ್ತಲು ಅವಕಾಶ ನೀಡಲಾಗುತ್ತದೆ ಎಂದು ಭಾರತ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಇಟಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿರುವ ಕಾರಣ, ಆಸ್ಪತ್ರೆಗಳು ಗಿಜಿಗಿಟ್ಟುತ್ತಿವೆ. ಯಾರಾದರೂ ಅನಾರೋಗ್ಯ ಪೀಡಿತರಾದರೆ ಮಾತ್ರ ಅವರನ್ನು ತಪಾಸಣೆ ಮಾಡಿ ಸರ್ಟಿಫಿಕೇಟ್ ನೀಡಲಾಗುತ್ತದೆ. ಸ್ವಸ್ಥರಾಗಿದ್ದರೆ ಅವರನ್ನು ತಪಾಸಣೆ ಮಾಡುತ್ತಿಲ್ಲ. ಹಾಗೂ ಸರ್ಟಿಫಿಕೇಟನ್ನೂ ನೀಡುತ್ತಿಲ್ಲ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳು ವಿಮಾನ ನಿಲ್ದಾಣದಲ್ಲಿಯೇ ಸಿಲುಕಿ, ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ವಿಚಾರ ತಿಳಿದ ಕೇಂದ್ರ ಸರ್ಕಾರ ಇದೀಗ ಭಾರತೀಯರ ರಕ್ಷಣೆಗೆ ಧಾವಿಸಿದ್ದು, ಶೀಘ್ರದಲ್ಲಿಯೇ ಭಾರತೀಯರ ಆರೋಗ್ಯ ತಪಾಸಣೆ ನಡೆಸಲು ವೈದ್ಯರ ತಂಡವನ್ನು ಭಾರತೀಯರರಿರುವ ಸ್ಥಳಕ್ಕೆ ರವಾನಿಸುವುದಾಗಿ ತಿಳಿಸಿದೆ.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಇಬ್ಬರು ಮೈಕ್ರೋಬೈಯೋಲಾಜಿಸ್ಟ್ ಹಾಗೂ ಇಬ್ಬರು ವೈದ್ಯಕೀಯ ತಜ್ಞರಿರುವ ನಾಲ್ವರು ವೈದ್ಯರ ತಂಡವನ್ನು ರವಾನಿಸುವುದಾಗಿ ಎನ್'ಸಿಡಿಸಿ ಮಾಹಿತಿ ನೀಡಿದೆ.


