ಕಾಸರಗೋಡು:ಮನೆಗಳಿಗೆ ಟಪ್ಪಾಲು ವಿತರಣೆ ನಡೆಸುವವರು, ಆನ್ ಲೈನ್ ಮೂಲಕ ಮುಂಗಡ ಬುಕ್ಕಿಂಗ್ ನಡೆಸಿದ ಉತ್ಪನ್ನಗಳನ್ನು ತರುವವರು, ಆಹಾರ ವಿತರಣೆ(ಹೋಂ ಡೆಲಿವರಿ)ಇತ್ಯಾದಿ ಸೇವೆ ನಡೆಸುವವರು ಕರೊನಾ ಹರಡುವಿಕೆ ಸಂಬಂಧ ಅಗತ್ಯದ ಸುರಕ್ಷತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಇತರರಿಗೆ ರೋಗ ಹರಡದಂತೆ ತಡೆಯುವ ಉದ್ದೇಶದಿಂದ ಈ ಕ್ರಮಕೈಗೊಳ್ಳಬೇಕಾಗಿದೆ. ಸಂಸ್ಥೆಗಳ ಮುಖ್ಯಸ್ಥರು ವಿತರಿಗೆ ಅಗತ್ಯವಿರುವ ಮಾಸ್ಕ್, ಸಾನಿಟೈಸರ್ ಇತ್ಯಾದಿ ಒದಗಿಸಬೇಕು. ಯಾವುದೇ ರೀತಿಯ ಅಸ್ವಸ್ಥತೆ, ರೋಗಲಕ್ಷಣ ಕಂಡುಬಂದಲ್ಲಿ ಚಿಕಿತ್ಸೆ ಪಡೆದು, ಪೂರ್ಣಗುಣಮುಖರಾಗುವವರೆಗೆ ವನೆಯಲ್ಲೇ ಇರುವಂತೆ ಮಾಡಬೇಕು. ಇಂಥಾ ಕಾಯಕಗಳಲ್ಲಿರುವವರಿಗೆ ಅಸೌಖ್ಯ ಸಂಬಂಧ ರಜೆ ನೀಡುವಲ್ಲಿ ಮುಖ್ಯಸ್ಥರು ಹಿಂದೇಟು ಹಾಕಕೂಡದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜನ ಸೇರಿದರೆ ಕ್ರಮ:
ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರಾಧನಾಲಯಗಳಲ್ಲಿ 50ಕ್ಕಿಂತ ಅಧಿಕ ಮಂದಿ ಸೇರಿದರೆ ಆಯಾ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಸಾರ್ವಜನಿಕ-ಖಾಸಗಿ ಜಾಗಗಳಲ್ಲೂ 50ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳಬಾರದು. ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆನೀಡಿರುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದವರು ತಿಳಿಸಿದ್ದಾರೆ.

