ಕಾಸರಗೋಡು: 'ವಿಶ್ವ ಒಂದು ಕುಟುಂಬ'ಎಂಬ ಸಂದೇಶದೊಂದಿಗೆ ಕೊಲ್ಲೂರಿನಿಂದ ಆರಂಭಗೊಂಡಿರುವ ಶ್ರೀರಾಮನವಮಿ ರಥಯಾತ್ರೆ ಗೆ ಕಾಸರಗೋಡಿನ ವಿವಿಧೆಡೆ ಸ್ವಾಗತ ಸಮಾರಂಭ ನಡೆಯಿತು. ಕಾಸರಗೋಡು ಚಿನ್ಮಯ ವಿದ್ಯಾಲಯದ ವಠಾರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚಿನ್ಮಯ ಮಿಶನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತೀ ಸ್ವಾಗತ ಕೋರಿದರು. ರಥದಲ್ಲಿನ ಶ್ರೀರಾಮ ದೇವರ ವಿಗ್ರಹಕ್ಕೆ ಆರತಿ ಬೆಳಗಿ ಆಶೀರ್ವಚನ ನೀಡಿದರು.
ಕೊಲ್ಲೂರಿನಿಂದ ಮಂಗಳೂರು ಹಾದಿಯಾಗಿ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮ, ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನ, ಕಾಸರಗೋಡು ಪಾಲಕುನ್ನು ಶ್ರೀ ಭಗವತೀ ಕ್ಷೇತ್ರ, ಕೋಟಿಕುಳಂ ಶ್ರೀ ಕುರುಂಬಾ ಭಗವತೀ ಕ್ಷೇತ್ರ, ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನ, ಅರವತ್ ಪುಂಬಾಣಂಕುಯಿ ಕ್ಷೇತ್ರ, ಬೇಕಲ ಶ್ರೀ ಮುಖ್ಯಪ್ರಾಣ ಕ್ಷೇತ್ರ, ಕಾಞಂಗಾಡು ನಗರ ಪ್ರದಕ್ಷಿಣೆಯೊಂದಿಗೆ ಆನಂದಾಶ್ರಮದಲ್ಲಿ ಸಂಪನ್ನಗೊಂಡಿತು.
ಇದಕ್ಕೂ ಮೊದಲು ಪಾಲಕುನ್ನು ಶ್ರೀ ಭಗವತೀ ಕ್ಷೇತ್ರ ಭಂಡಾರದ ಮನೆ ವಠಾರದಲ್ಲಿ ರಥಯಾತ್ರೆಗೆ ಸ್ವಾಗತ ಮತ್ತು ಆಧ್ಯಾತ್ಮಿಕ ಸಮ್ಮೇಳನ ನಡೆಯಿತು.


