ಕಾಸರಗೋಡು: ಕಿನಾನೂರ್ ಕರಿಂದಳ ಪಂಚಾಯಿತಿಯ ಕುರುಕುಟ್ಟಿಪಾಯಿಲ್ ಅರಣ್ಯ ಪ್ರದೇಶದಲ್ಲಿ ಕೋತಿಗಳು ಸಾಮೂಹಿಕವಾಗಿ ಸಾವಿಗೀಡಾಗಿರುವ ಪ್ರದೇಶಕ್ಕೆ ಜಿಲ್ಲಾ ವೆಟರಿನರಿ ವೈದ್ಯರ ತಂಡ ಭೇಟಿ ನೀಡಿ ತಪಸಣೆ ನಡೆಸಿದರು. ಕರಿಂದಳ ಪಶುಆರೋಗ್ಯ ಇಲಾಖೆ ಅಧಿಕಾರಿಗಳು ಜೊತೆಗಿದ್ದರು.
ಮೃತಪಟ್ಟ ಮಂಗಗಳ ಕಳೇಬರ ತಪಾಸಣೆ ನಡೆಸಿದ ಅಧಿಕಾರಿಗಳು, ಇವುಗಳ ರಕ್ತದ ಮಾದರಿಯನ್ನು ಉನ್ನತ ತಪಾಸಣೆಗಾಗಿ ಪೂನಾದ ವೈರಲಜಿ ಇನ್ಸ್ಟಿಟ್ಯೂಟ್ಗೆ ಕಳುಹಿಸಿಕೊಟ್ಟಿದ್ದಾರೆ. ಮಂಗಗಳು ಸತ್ತುಬಿದ್ದಿದ್ದ ಈ ಪ್ರದೇಶದಲ್ಲಿ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸುತ್ತಿದ್ದು, ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ. ವರದಿ ಕೈಸೇರಿದ ನಂತರವಷ್ಟೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾಲ್ಮಿಯಾ ನಿಯಾ ಜೇಮ್ಸ್, ಆರೋಗ್ಯ ಮೇಲ್ವಿಚಾರಕ ನಂದಕುಮಾರ್, ಕರಿಂದಳ ಗ್ರಾಮ ಪಂಚಾಯಿತಿ ಆರೋಗ್ಯಾಧಿಕಾರಿ ಜಗದೀಶನ್ ಉಪಸ್ಥಿತರಿದ್ದರು.
ಕುರುಕುಟ್ಟಿಪಾಯಿಲ್ ಅರಣ್ಯ ಪ್ರದೇಶದಲ್ಲಿ ವಾರದ ಹಿಂದೆ ಐದು ಕೋತಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

