ಬದಿಯಡ್ಕ: ಜಗತ್ತಿನಾದ್ಯಂತ ಆತಂಕ ಮೂಡಿಸಿರುವ ಕೊರೋನಾ ವೈರಸ್ ಜನರಲ್ಲಿ ಭೀತಿ ಹುಟ್ಟಿಸಿದೆ. ಸರ್ಕಾರಗಳ ಸಲಹೆ, ಮನವಿಗಳ ಹೊರತಾಗಿಯೂ ಬಹುತೇಕ ಜನರು ವೃಥಾ ಆತಂಕ್ಕಕ್ಕೆ ಒಳಗಾಗಿ ಮನೆಯಿಂದ ಹೊರ ಬಾರದೆ ಪರಿತಪಿಸುತ್ತಿರುವುದೂ ಕಂಡುಬಂದಿದೆ. ಜೊತೆಗೆ ಮತ್ತೆ ಕೆಲವೆಡೆ ತಮಗೂ ಕೊರೋನಾ ವೈರಸ್ಸಿಗೂ ಯಾವ ಸಂಬಂಧವೂ ಇಲ್ಲವೆಂಬಂತೆ ಜನಜಂಗುಳಿ ಸೇರಿಸುವ, ನಿಯಂತ್ರಣ ಕ್ರಮಕ್ಕೆ ಎದುರಾಡುವ ಜನವರ್ಗವೂ ಹೆಚ್ಚುತ್ತಿದೆ.
ಈ ಮಧ್ಯೆ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಕೊರೋನಾ ವೈರಸ್ ಬಗ್ಗೆ ಜಾಗೃತಿ ಇನ್ನೂ ಬಾರದಿರುವುದೂ ಆತಂಕಕಾರಿ. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾ.ಪಂ.ಗಳು ಈಗಷ್ಟೆ ಎಚ್ಚೆತ್ತುಕೊಳ್ಳುತ್ತಿದೆ.
ಆದರೆ ಅತೀ ಹಿಂದುಳಿದಿರುವ ಕುಂಬ್ಡಾಜೆ ಗ್ರಾ.ಪಂ. ವ್ಯಾಪ್ತಿಯ ಏತಡ್ಕ ಗ್ರಾಮದಲ್ಲಿರುವ ಸಾರ್ವಜನಿಕ ವಿತರಣಾ ಕೇಂದ್ರ(ರೇಶನ್ ಅಂಗಡಿ)ದ ನಿರ್ವಾಹಕರಾದ ಉದಯಕುಮಾರ್ ಪಿ.ಕೆ.ಸ್ವತಃ ಜಾಗೃತಿ ಮೂಡಿಸುವ ಪಣದೊಂದಿಗೆ ರೇಶನ್ ಅಂಗಡಿಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನಿಗೂ ಸ್ಪಷ್ಟ ರೀತಿಯಲ್ಲಿ ಪ್ರಾತ್ಯಕ್ಷಿಕೆ ಸಹಿತ ಮಾರ್ಗದರ್ಶನ ನೀಡುತ್ತಿರುವುದು ಕುತೂಹಲದೊಂದಿಗೆ ಶ್ಲಾಘನೆಗೆ ಪಾತ್ರವಾಗಿದೆ.
ಅತಿ ದೊಡ್ಡ ಕೇಂದ್ರ-ಮಾಹಿತಿ ಲಭ್ಯವಾಗುವುದು ವ್ಯಾಪಕ:
ಏತಡ್ಕದ ಸಾರ್ವಜನಿಕ ವಿತರಣಾ ಕೇಂದ್ರದಲ್ಲಿ 576 ಮಂದಿ ಪಡಿತರ ಚೀಟಿದಾರರಿದ್ದು ಒಂದು ಕುಟುಂಬವೆಂದರೆ 4 ರಂತೆ 2304 ಮಂದಿಗೆ ಕೊರೋನಾ ವೈರಸ್ಸಿನ ಬಗ್ಗೆ ಸಂಪೂರ್ಣ ಮಾಹಿತಿ ಉದಯಕುಮಾರ್ ಅವರ ಮೂಲಕ ಲಭ್ಯವಾಗುತ್ತಿರುವುದು ಚಿಕ್ಕ ವಿಷಯವೇನೂ ಅಲ್ಲ. ಪ್ರತಿನಿತ್ಯ 30 ರಿಂದ 40 ಮಂದಿಗಳು ಆಗಮಿಸುವ ತಮ್ಮ ರೇಶನ್ ಅಂಗಡಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಉದಯಕುಮಾರ್ ಒದಗಿಸುತ್ತಿದ್ದಾರೆ. ಕೊರೋನಾ ವೈರಸ್ ಎಂದರೆ ಏನು, ರೋಗ ಲಕ್ಷಣ, ನಿಯಂತ್ರಣ ಕ್ರಮಕ್ಕೆ ಪಾಲಿಸುವ ನಿಬಂಧನೆಗಳು, ಮುಖ ಕವಚ ಬಳಸುವುದು, ಕೈತೊಳೆಯುವುದು, ಸಾನಿಸೈಟರ್ ಬಳಕೆ ಮೊದಲಾದವುಗಳ ಬಗ್ಗೆ ಒಬ್ಬೊಬ್ಬ ಗ್ರಾಹಕನಿಗೂ ಮನ-ಮುಟ್ಟುವಂತೆ ಉದಯಕುಮಾರ್ ತಿಳಿಸಿಕೊಡುತ್ತಿದ್ದಾರೆ.
ಪ್ರಸ್ತುತ ಸ್ಥಳೀಯಾಡಳಿತ ಸಂಸ್ಥೆಗಳು ಕರಪತ್ರಗಳನ್ನು ಮುದ್ರಿಸತೊಡಗಿದ್ದು, ಒಂದೆರಡು ದಿನಗಳ ಬಳಿಕ ಕುಟುಂಬಶ್ರೀ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಇನ್ನಷ್ಟೇ ಮನೆ ಸಂದರ್ಶನ ಅಥವಾ ಸಾರ್ವಜನಿಕ ಕೇಂದ್ರಗಳ ಮೂಲಕ ಜಾಗೃತಿಗೆ ಇಳಿಯಲಿದೆ. ಆದರೆ ಬಹುಸಂಖ್ಯೆಯ ಜನರು ಒಟ್ಟಾಗುವ ಅಥವಾ ಆಗಮಿಸುವ ಕೇಂದ್ರವಾಗಿರುವ ಪಡಿತರ ಅಂಗಡಿಯ ಮೂಲಕ ಇಂತಹದೊಂದು ಜನಪರ ಚಟುವಟಿಕೆಗೆ ತೊಡಗಿಸಿಕೊಂಡ ಉದಯಕುಮಾರ್ ಅವರ ಜನಸೇವೆ ಶ್ಲಾಘನೆಗೊಳಗಾಗಿದೆ.
ಅಭಿಮತ:
1)ಜಗತ್ತಿಗೇ ಬಂದಿರುವ ಇಂತಹದೊಂದು ಆಪತ್ತಿನ ಬಗ್ಗೆ ಜಾಗೃತಿ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮಟ್ಟದ ಜನಸಾಮಾನ್ಯರಿಗೆ ಅರಿವು ಮೂಡಿಸಲು ಸ್ವಯಂ ಪ್ರೇರಿತನಾಗಿ ನಾನು ಇಂತಹದೊಂದು ಉಪಕ್ರಮವನ್ನು ತಳೆದಿದ್ದು, ಜನರಿಂದ ಮುಕ್ತ ಸ್ವಾಗತ ವ್ಯಕ್ತವಾಗಿದೆ. ವೈಯುಕ್ತಿಕ ನೈರ್ಮಲ್ಯ ಸಹಿತ ಇತರ ಕ್ರಮಗಳಿಗೆ ಜನರು ಇನ್ನಾದರೂ ಆಸಕ್ತರಾಗದಿದ್ದಲ್ಲಿ ಜೀವಾಪಾಯ ಕಂಗೆಡಿಸಲಿದೆ. ಆದ್ದರಿಂದ ಸರಳ ವಿಧಾನಗಳಿಂದ ಬದುಕನ್ನು ಸಂತಸಗೊಳಿಸಬಹುದಾಗಿದೆ.
ಉದಯಕುಮಾರ್ ಪಿ.ಕೆ.
ಏತಡ್ಕ ಸಾರ್ವಜನಿಕ ವಿತರಣಾ ಕೇಂದ್ರದ ನಿರ್ವಾಹಕರು.
...............................................................................................................
2)ಕೊರೋನಾ ಮುಂಜಾಗ್ರತೆಯ ಕುರಿತು ಏತಡ್ಕ ಪರಿಸರದ ಐನ್ನೂರಕ್ಕಿಂತಲೂ ಹೆಚ್ಚು ಮನೆಗಳಿಗೆ(ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ಮಂದಿಗೆ) ಅರಿವು ಮೂಡಿಸುವಲ್ಲಿ ಏತಡ್ಕ ರೇಶನ್ ಅಂಗಡಿಯ ನಿರ್ವಾಹಕರ ಪ್ರಯತ್ನ ಪ್ರಶಂಸನಾರ್ಹ. ಇಂತಹ ಪ್ರಯತ್ನಗಳು ಗ್ರಾಮ ಗ್ರಾಮಗಳಿಗೂ ವಿಸ್ತರಿಸಬೇಕು.
ಚಂದ್ರಶೇಖರ ಏತಡ್ಕ.
ಮಾಹಿತಿ ನೀಡಿದವರು. ಪ್ರಗತಿಪರ ಕೃಷಿಕರು.



