ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಲೋಕ ವ್ಯಾಪಿಯಾಗಿ ಹರಡಿಕೊಂಡಿರುವ ಮಹಾಮಾರಿ 'ಕೊರೋನ' ರೋಗದ ಬಗ್ಗೆ ಯಕ್ಷಗಾನ ಮಾಧ್ಯಮದ ಮೂಲಕ ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಜಾಲತಾಣಗಳಲ್ಲಿ ಬಿತ್ತರಿಸುವ ಸಲುವಾಗಿ ಕೊರೊನಾ ಯಕ್ಷ ಜಾಗೃತಿ' ಎಂಬ ಯಕ್ಷಗಾನವನ್ನು ಪ್ರಸ್ತುತ ಪಡಿಸಿ ದಾಖಲಿಸಿ ಬಿತ್ತರಿಸಿದೆ. ಮಾತ್ರವಲ್ಲ ಜಾಲಮಾಧ್ಯಮಗಳಲ್ಲಿ ಇಂದು ಸಹಸ್ರಾರು ವೀಕ್ಷಕರು ವೀಕ್ಷಿಸಿ ಪ್ರತಿಕ್ರಿಯಿಸುತ್ತಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಯವರ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ದಾಖಲೀಕರಣಗೊಂಡ ಯಕ್ಷಗಾನ ಕೊರೊನಾಸುರ ಕಾಳಗ ಪ್ರಸಂಗದ ಹಾಡುಗಳನ್ನು ಖ್ಯಾತ ಯಕ್ಷಗಾನ ಕವಿ ಡಾ. ಶ್ರೀಧರ ಡಿ ಎಸ್ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಪದ್ಯರಚನೆ ಮಾಡಿರುತ್ತಾರೆ. ತೆಂಕುತಿಟ್ಟಿನ ಖ್ಯಾತ ಕಲಾವಿದರು ಭಾಗವಹಿಸಿದ್ದು ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವಾಭಾದಿಂದ ಪಾಲ್ಗೊಂಡಿದ್ದಾರೆ. ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯವರು ಉಚಿತವಾಗಿ ವೇಶ ಭೂಷಣ ಒದಗಿಸಿ ತಮ್ಮ ಸೇವೆಯನ್ನು ತೋರಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರು ಸಿರಿಬಾಗಿಲು ರಾಮಕೃಷ್ಣ ಮಯ್ಯ ಚೆಂಡೆ ಶಂಕರ ನಾರಾಯಣ ಭಟ್ ನಿಡುವಜೆ, ಮದ್ದಳೆ ಉದಯ ಕಂಬಾರು , ಚಕ್ರ ತಾಳದಲ್ಲಿ ಶ್ರೀಮುಖ ಯಸ್ ಆರ್ ಮಯ್ಯ ಹಾಗೂ ಪಾತ್ರವರ್ಗದಲ್ಲಿ ಕೊರೋನಾ ರಾಧಾಕೃಷ್ಣ ನಾವಡ ಮಧೂರು, ಧನ್ವಂತರಿ ವಾಸುದೇವ ರಂಗಾಭಟ್ ಮಧೂರು, ರಾಜೇಂದ್ರ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಮಣಿಭದ್ರ ಗುರುರಾಜ ಹೊಳ್ಳ ಬಾಯಾರು, ಪತ್ನಿ ಪ್ರಕಾಶ್ ನಾಯಕ್ ನೀರ್ಚಾಲು, ಮಣಿಕರ್ಣ ಕಿಶನ್ ಅಗ್ಗಿತ್ತಾಯ, ಪುರಜನರು ಶ್ರೀಕೃಷ್ಣ ಭಟ್ ದೇವಕಾನ, ಶಬರೀಶ ಮಾನ್ಯ ಕಿರಣ್ ಕುದ್ರೆಕೋಡ್ಲು, ವೇಶಭೂಷಣ ಗಣೇಶ ಕಲಾವೃಂದ ಪೈವಳಿಕೆ, ಚಿತ್ರೀಕರಣ ವರ್ಣ ಸ್ಟುಡಿಯೋ ನೀರ್ಚಾಲ್, ಕ್ಯಾಮರಾ ಸಹಕಾರ ಉದಯ ಕಂಬಾರು, ವೇಣುಗೋಪಾಲ್, ಶೇಖರ ವಾಂತಿಚ್ಚಾಲ್, ಮಹೇಶ್ ತೇಜಸ್ವಿ ನೀರ್ಚಾಲು ಸಹಕರಿಸಿಸಿದ್ದಾರೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಲವಾರು ಯಕ್ಷಗಾನೀಯ ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಕೊಡುಗೆ ಯಕ್ಷಗಾನ ಲೋಕಕ್ಕೆ ನೀಡಿದೆ. ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಿಸಿ ತನ್ಮೂಲಕ ನಿರಂತರ ಯಕ್ಷಗಾನ ಅಧ್ಯಯನ ಹಾಗೂ ಸಂಶೋಧನೆ ವಸ್ತುಸಂಗ್ರಹಾಲಯ, ಸಭಾಂಗಣ ನಡೆಸುವ ಇರಾದೆಯನ್ನು ಹೊಂದಲಾಗಿದ್ದು ಕಾಮಗಾರಿ ಭರದಿಂದ ಸಾಗುತ್ತಿರುವುದು ಉಲ್ಲೇಖಾರ್ಹ.
ಒಟ್ಟು 57.29 ನಿಮಿಷಗಳ ವೀಡಿಯೋ ಗಣೇಶ ಕಲಾವೃಂದದ ನಿರ್ದೇಶಕ ಶ್ರೀಕೃಷ್ಣ ಭಟ್ ದೇವಕಾನ ಅವರ ಸ್ವಗೃಹ ದೇವಕಾನದ ಮನೆಯಂಗಳದ ಸರಳ ಸಹಜ ವೇದಿಕೆಯಲ್ಲಿ ದಾಖಲೀಕರಣಗೊಂಡಿದ್ದು, ಹಿನ್ನೆಲೆಯ ಸಹಜ ಪ್ರಕೃತಿಯ ದೃಶ್ಯಗಳು ಗಮನ ಸೆಳೆದಿದೆ.
ಕಥಾನಕದ ಆರಂಭದಲ್ಲಿ ಭೀಕರ ಕೊರೋನಾಸುರನ ಅಬ್ಬರದ ಪ್ರವೇಶ, ಜಗತ್ತಿನಲ್ಲಿ ಮಾನವನ ಅತಿಮಾನುಷ ಸ್ವಾರ್ಥ ಲಾಕಲಸೆ, ಪ್ರಾಣಿ ಹಿಂಸೆಗಳನ್ನು ಉಲ್ಲೇಖೀಸಿ ಇದರ ನಿವಾರಣೆಗೆ ತಾನು ಹುಟ್ಟಿರುವೆನೆಂದು ತಿಳಿಸಿ ಮಾನವ ನಿರ್ನಾಮಕ್ಕೆ ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ರಾಷ್ಟ್ರದಲ್ಲಿ ಹುಟ್ಟಿ ಅಲ್ಲಿಂದ ವಿಶ್ವ ವ್ಯಾಪಿಗೊಂಡು ಬಳಿಕ ಭರತ ಖಂಡಕ್ಕೆ ಪ್ರವೇಶಿಸುವಲ್ಲಿಗೆ ಒಂದನೇ ಅಂಕ ಕೊನೆಗೊಳ್ಳುತ್ತದೆ. ಎರಡನೇ ಅಂಕೆಯಲ್ಲಿ ಭರತ ಖಂಡದ ಮಣಿಭದ್ರನೆಂಬ ವರ್ತಕ-ದಂಪತಿಗಳ ಪ್ರವೇಶ, ಅವರ ಪುತ್ರ ವಿದೇಶದಲ್ಲಿ ಓದುತ್ತಿದ್ದವನು ಊರಿಗೆ ಮರಳುವುದು, ಗೆಳೆಯರೊಂದಿಗೆ ಆಟಕ್ಕೆ ತೆರಳಿದವನು ಮರಳುವಾಗ ಅಸ್ವಸ್ತನಾಗಿ ಬಂದು ಪ್ರಜ್ಞೆತಪ್ಪಿ ಬೀಳುವುದು, ಪುರ ಜನರಿಂದ ಪರಿತಾಪ, ಬಳಿಕ ರಾಜನಾದ ರಾಜೇಂದ್ರ ಅರಸನಲ್ಲಿಗೆ ತೆರಳಿ ಸಂಕಷ್ಟದ ನಿವೇದನೆ, ರಾಜೇಂದ್ರನು ದಿಕ್ಕು ಕಾಣದೆ ಧನ್ವಂತರಿ ದೇವರ ಪ್ರಾರ್ಥನೆ, ಧನ್ವಂತರಿಯ ಪ್ರತ್ಯಕ್ಷ, ಧನ್ವಂತರಿಯಿಂದ ಸಮಾಧಾನ, ಬಳಿಕ ಧನ್ವಂತರಿ ಮತ್ತು ಕೊರೋನಾಸುರನ ಮಾತಿನ ಚಕಮಕಿ,ಯುದ್ದ ಹಾಗೂ ಕೊರೋನಾಸುರನ ಹಿಮ್ಮೆಟ್ಟುವಿಕೆಯಲ್ಲಿ ಸುಖಾಂತ್ಯಗೊಳ್ಳುತ್ತದೆ. ಕೊನೆಯ ಭಾಗದಲ್ಲಿ ರಾಜೇಂದ್ರನು ಧ್ನ್ವಂತರಿಗೆ ಅಭಿನಂದನೆ, ಈ ಸಂದರ್ಭ ಧನ್ವಂತರಿಯು ಜಗತ್ತಿನ ಕಣ್ತೆರೆಸುವ ಸಂದೇಶಗಳ ಮೂಲಕ ಜಾಗೃತಿ, ಹಾಗೂ ಭಾನುವಾರದ ಜನತಾ ಕಪ್ರ್ಯೂ ಯಶಸ್ಸುಗೊಳಿಸುವ ಅಗತ್ಯದ ಬಗ್ಗೆ ತಿಳಿಸುತ್ತಾ ಕಥಾನಕ ಕೊನೆಗೊಳ್ಳುತ್ತದೆ.



