ಕಾಸರಗೋಡು: ಕೋವಿಡ್-19 ವೈರಸ್ ವ್ಯಾಪಿಸದಿರುವಂತೆ ಕೇರಳಾದ್ಯಂತ ಲಾಕ್ಡೌನ್ ನಡೆಸುತ್ತಿದ್ದಂತೆ ವಾಹನಗಳು ರಸ್ತೆಗಿಳಿಯದಂತೆ ಪೊಲೀಸರು ಮಂಗಳವಾರದಿಂದಲೇ ಕ್ರಮ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್ ಸಾಬು ಅವರ ನಿರ್ದೇಶದನ್ವಯ ಜಿಲ್ಲಾದ್ಯಂತ ಪೊಲೀಸರು ವ್ಯಾಪಕ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಪೊಲೀಸರ ಎಚ್ಚರಿಕೆಯನ್ನೂ ಉಲ್ಲಂಘಿಸಿ ಕೆಲವರು ಅನಾವಶ್ಯಕವಾಗಿ ದ್ವಿಚಕ್ರ ಸಹಿತ ತಮ್ಮ ವಾಹನಗಳಲ್ಲಿ ಸುತ್ತಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ದ್ವಿಚಕ್ರವಾಹನಗಳಲ್ಲಿ ಒಬ್ಬರಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ಮಾಸ್ಕ್ ಕೂಡಾ ಧರಿಸದೆ ಇಬ್ಬರು ಸಂಚರಿಸುತ್ತಿದ್ದರು.
ವಾಹನದಲ್ಲಿ ಸುತ್ತಾಡುವವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕರಪತ್ರ ವಿತರಿಸಿ, ಕರೊನಾ ವೈರಸ್ನ ಗಂಭೀರತೆ ಬಗ್ಗೆ ಬೋಧನೆ ನೀಡಿದರು. ಯಾರೂ ಮನೆಯಿಂದ ಹೊರಗಿಳಿಯದಂತೆ ಮಾಡುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಲಾಕ್ಡೌನ್ ನಡೆಸಿದ್ದರೂ, ಕೆಲವೊಂದು ವಾಹನಗಳು ರಸ್ತೆಗಿಳಿದಿದ್ದು, ಆಸ್ಪತ್ರೆ, ತುರ್ತುಕಾರ್ಯ ಸಹಿತ ಅತ್ಯಾವಶ್ಯಕ ಎಂದು ತಿಳಿದು ಬಂದಲ್ಲಿ ಮಾತ್ರ ಇಂತಹ ವಾಹನಗಳನ್ನು ಬಿಟ್ಟುಕೊಡಲಾಗುತ್ತಿದೆ.
ಪ್ರಮಾಣಪತ್ರ ನೀಡಿ:
ಮಾರ್ಚ್ 25ರಿಂದ ತುರ್ತು ಕಾರ್ಯಗಳಿಗೆ ರಸ್ತೆಗಿಳಿಯುವ ವಾಹನಗಳು ಕಡ್ಡಾಯವಾಗಿ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ ಬೆಹ್ರಾ ತಿಳಿಸಿದ್ದಾರೆ. ಪ್ರಮಾಣಪತ್ರದಲ್ಲಿನ ಮಾಹಿತಿ ಸುಳ್ಳಾಗಿದ್ದರೆ, ಇವರ ಮೇಲೆ ಕನೂನುಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ಸಂಸ್ಥೆಗಳ ನೌಕರರಿಗೆ ಪೊಲೀಸ್ ಇಲಾಖೆಯಿಂದ ಸಂಚಾರಕ್ಕೆ ಪಾಸ್ ನೀಡಲಾಗುವುದು. ಇನ್ನು ಪತ್ರಕರ್ತರು, ಸರ್ಕಾರಿ ನೌಕರರು ತಮ್ಮ ಗುರುತಿನ ಚೀಟಿಯನ್ನು ಅಧಿಕೃತ ಪಾಸ್ ಆಗಿ ಬಳಸಿಕೊಳ್ಳಬಹುದಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರ ಬಂದಲ್ಲಿ ವೈರಸ್ ಶೀಘ್ರ ವ್ಯಾಪಿಸುವ ಸಾಧ್ಯತೆಯಿದ್ದು, ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಹಿತ ಕರ್ನಾಟಕ ಗಡಿಪ್ರದೇಶ ಹಂಚಿಕೊಂಡಿರುವ ಪ್ರದೇಶದಲ್ಲಿ ಹಾಗೂ ಕಣ್ಣೂರು ಜಿಲ್ಲೆಯ ಗಡಿಯಲ್ಲಿ ಈಗಾಗಲೇ ವಾಹನ ಸಂಚಾರ ಕಟ್ಟುನಿಟ್ಟಾಗಿ ನಿಲ್ಲಿಸಲಾಗಿದೆ. ಪೆರ್ಲ ಪೇಟೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತತಿದ್ದು, ಕಾಸರಗೋಡು ಭಾಗಕ್ಕೆ ಯಾವುದೇ ವಾಹನ ತೆರಳದಂತೆ ತಡೆಯುತ್ತಿದ್ದಾರೆ. ವ್ಯಾಪಾರಿ ಸಂಸ್ಥೆಗಳಲ್ಲಿ ಜನಸಂದಣಿ ಏರ್ಪಡದಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಮಾರ್ಚ್ 31ರ ವರೆಗೆ ರಾಜ್ಯದಲ್ಲಿ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಿರುವುದಾಗಿ ರಸಗೊಬ್ಬರ-ಕೀಟನಾಶಕ ಮಾರಾಟಗಾರರ ರಾಜ್ಯ ಸಮಿತಿ ಪ್ರಕಟಣೆ ತಿಳಿಸಿದೆ.
(ಚಿತ್ರ ಮಾಹಿತಿ: ಕೇರಳ-ಕರ್ನಾಟಕ ಗಡಿ ಪ್ರದೇಶ ಸಾರಡ್ಕದಲ್ಲಿ ಕರ್ನಾಟಕ ಪೊಲೀಸರಿಂದ ಗೇಟನ್ನು ಮರದಸಲಾಕೆಗಳಿಂದ ಬಿಗಿದು ಸೈಕಲ್ ಸಹಿತ ಯಾವುದೇ ವಾಹನ ಸಂಚರಿಸದಂತೆ ಭದ್ರಪಡಿಸಲಾಗಿದೆ.
ಕಾಸರಗೋಡಿನಲ್ಲಿ ವಾಹನ ತಪಾಸಣೆ ಚುರುಕುಗೊಳಿಸಿರುವುದು)


