ಪೆರ್ಲ: ಕೊರೊನಾ ವೈರಸ್ ಕಾಸರಗೋಡು ಜಿಲ್ಲೆಯಲ್ಲಿ ಹಾಗೂ ಕೇರಳದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಉಕ್ಕಿನಡ್ಕದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ. ವಿಭಾಗ ತೆರೆಯಬೇಕೆಂದು ಯೂತ್ ಕಾಂಗ್ರೆಸ್ ಕಾಸರಗೋಡು ಪಾರ್ಲಿಮೆಂಟ್ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಎಚ್.ಆರಿಸ್ ಶೇಣಿ ಆಗ್ರಹಿಸಿದ್ದಾರೆ.
ಭಯಾನಕವಾದ ಕೊರೊನಾ ಜಿಲ್ಲೆಗೂ ಕಾಲಿಟ್ಟಿದ್ದೂ ಜನತೆಯನ್ನು ಭೀತಿಗೊಳಪಡಿಸಿದೆ. 400 ಕ್ಕೂ ಮಿಕ್ಕು ಮಂದಿ ಜಿಲ್ಲೆಯಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಈಗಾಗಲೇ ಜಿಲ್ಲೆಯ ನಿವಾಸಿಯೊಬ್ಬರಿಗೆ ಕೊರೊನಾ ಖಚಿತಗೊಂಡಿದೆ. ಆದುದರಿಂದ ಕೊರೊನಾ ಚಿಕಿತ್ಸೆಗಾಗಿ ಬದಿಯಡ್ಕ ಉಕ್ಕಿನಡ್ಕದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ. ವಿಭಾಗ ತೆರೆದು ನೀಡಲು ಸರಕಾರಿ ಮಟ್ಟದಲ್ಲಿ ಆದೇಶ ಹೊರಡಿಸಬೇಕು ಎಂದು ಎಂ.ಎಚ್.ಆರಿಸ್ ಶೇಣಿ ಆಗ್ರಹಿಸಿದ್ದಾರೆ.
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅನಿವಾಸಿಗಳು, ಹೊರರಾಜ್ಯ, ಹೊರರಾಷ್ಟ್ರಗಳಿಂದ ರಾಜ್ಯಕ್ಕೆ ನೌಕರಿ ಹುಡುಕಿ ಬಂದವರು ಕೇರಳದಲ್ಲಿ ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಿಂದ ಕೊರೊನಾ ಭೀತಿ ಜಿಲ್ಲೆಯಲ್ಲಿ ಹೆಚ್ಚು ಆತಂಕ ಸೃಷ್ಟಿಸಿದೆ. ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ. ವಿಭಾಗ ತೆರೆದು ನೀಡಿದರೆ ಪರಿಸರ ನಿವಾಸಿಗಳಿಗೆ ಭರವಸೆದಾಯಕವಾಗಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

