ಕುಂಬಳೆ: ಕೇರಳ-ಕರ್ನಾಟಕ ಗಡಿ ಪ್ರದೇಶಗಳು ಸಂಪೂರ್ಣವಾಗಿ ಮುಚ್ಚಿದ ಪರಿಣಾಮ ಮಂಗಳೂರು, ಸುಳ್ಯ ಮೊದಲಾದ ಪ್ರದೇಶಗಳಲ್ಲಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದ್ದ ರೋಗಿಗಳಿಗೆ ಇಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಿ ಕೊಡಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
ಆರೋಗ್ಯ ವಿಭಾಗದಲ್ಲಿ ಈಗ ತಲೆದೋರಿರುವ ತುರ್ತುಪರಿಸ್ಥಿತಿಗೆ ಶೀಘ್ರದಲ್ಲಿ ಪರಿಹಾರ ಕಾಣಬೇಕೆಂದೂ ರಾಜ್ಯ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ. ಕಾಸರಗೋಡಿನ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಆಶ್ರಯಿಸಿರುವುದು ಮಂಗಳೂರು ಮತ್ತೆ ಸುಳ್ಯದಲ್ಲಿ ಇರುವಂತಹ ಆಸ್ಪತ್ರೆಗಳಾಗಿದೆ. ಡಯಾಲಿಸಿಸ್, ಕಿಮೊಥೆರಪಿ, ಹೃದಯ ಸಂಬಂಧಿ ಮತ್ತಿತರ ಚಿಕಿತ್ಸೆಗಳಿಗಾಗಿ ಮಂಗಳೂರು, ಸುಳ್ಯ ಇತ್ಯಾದಿ ಕಡೆಗಳಲ್ಲಿರುವ ಆಸ್ಪತ್ರೆಗಳನ್ನು ಆಶ್ರಯಿಸಿರುವ ರೋಗಿಗಳು ಇಂದು ದುರಿತ ಅನುಭವಿಸುತ್ತಿದ್ದಾರೆ. ಆ್ಯಂಬುಲೆನ್ಸನ್ನು ಸಹ ಜಿಲ್ಲೆಯ ಗಡಿಯಲ್ಲಿ ತಡೆಯುವ ಈ ಸಂದರ್ಭದಲ್ಲಿ ರೋಗಿಗಳಿಗೆ ಕಾಸರಗೋಡಿನಲ್ಲೇ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವು ಔಷಧಿ ಅಂಗಡಿಗಳು ತೆರೆಯದೇ ಇರುವುದು ಅಂಗೀಕರಿಸಲು ಅಸಾಧ್ಯ. ಎಲ್ಲಾ ಔಷಧಿ ಅಂಗಡಿಗಳು ತೆರೆದು ಕಾರ್ಯಾಚರಿಸುವಂತೆ ಮಾಡಬೇಕು.
ಸಂಪೂರ್ಣ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಕೆಲ ಪ್ರದೇಶಗಳಲ್ಲಿ ನಿತ್ಯೋಪಯೋಗಿ ಸಾಮಗ್ರಿಗಳು, ತರಕಾರಿ, ಹಣ್ಣುಹಂಪಲು ಬೆಲೆಯನ್ನು ಗಗನಕ್ಕೇರಿಸಲಾಗಿದೆ. ನಿತ್ಯೋಪಯೋಗಿ ಸಾಮಾಗ್ರಿಗಳ ಬೆಲೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ್ಳಬೇಕೆಂದು ಅವರು ಒತ್ತಾಯಿಸಿದರು. ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ದೇಲಂಪಾಡಿಯಂತಹ ಗ್ರಾಮ ಪೂರ್ಣವಾಗಿ ದ್ವೀಪದಂತಾಗಿದೆ. ಗ್ರಾಮ ವಾಸಿಗಳು ಆಹಾರ ಔಷಧ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ. ಅಲ್ಲದೆ ವನವಾಸಿಗಳಿಗೆ, ಕಾಲನಿಗಳಿಗೆ, ಮೀನುಗಾರರಿಗೆ ಆಹಾರ ಮತ್ತು ಔಷಧ ಸಾಮಾಗ್ರಿಗಳನ್ನು ತಲುಪಿಸಿಕೊಡಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿರುವರು.


