ಕಾಸರಗೋಡು: ಹೋಟೆಲ್ ಗಳನ್ನೇ ಆಶ್ರಯಿಸಿ ಬದುಕುತ್ತಿದ್ದ ಇತರ ರಾಜ್ಯಗಳ ಕಾರ್ಮಿಕರು ಇರುವ ಕೇಂದ್ರಗಳನ್ನು ಪತ್ತೆಮಾಡಿ ಅವರಿಗೆ ಆಹಾರ ಒದಗಿಸುವ ಸೌಲಭ್ಯ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಹೋಟೆಲ್, ಸಮುದಾಯ ಸಭಾಂಗಣ ಮುಂತಾದ ಕೇಂದ್ರಗಳಲ್ಲಿ ವಾರ್ಡ್ ಮಟ್ಟದ ಜನಜಾಗೃತಿಸಮಿತಿಗಳ ನೇತೃತ್ವದಲ್ಲಿ ಸಮುದಾಯ ಅಡುಗೆಮನೆ ನಿರ್ಮಿಸಿ, ಅಡುಗೆ ಅಲ್ಲೇ ಸಿದ್ಧಪಡಿಸಿ ಆಯ್ದ 10 ಸ್ವಯಂ ಸೇವಾ ಸಂಘಟನೆಗಳ ಮುಖಾಂತರ ದ್ವಿಚಕ್ರವಾಹನಗಳಲ್ಲಿ ಆಹಾರ ವಿತರಣೆ ನಡೆಸಲಾಗುವುದು ಎಂದದವರು ಹೇಳಿದ್ದಾರೆ.
ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಲೆದೋರಿರುವ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಆಹಾರ ವಿತರಣೆ,ಹೋಟೆಲ್, ಸಮುದಾಯ ಸಭಾಂಗಣ ಇತ್ಯಾದಿ ಪತ್ತೆ ಮಾಡುವ ಹೊಣೆಯನ್ನು ಕುಟುಂಬಶ್ರೀ ಜಿಲ್ಲ ಮಿಷನ್ ಸಂಚಾಲಕರಿಗೆ ನೀಡಲಾಗಿದೆ. ಕುಟುಂಬಗಳಿಗೆ ಸರಕಾರದ ಮಾದಂಡದ ಹಿನ್ನೆಲೆಯಲ್ಲಿ ಕಿಟ್ ಸಿದ್ಧಪಡಿಸಿ ನೀಡುವ ಅಂಗವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ದಾಸ್ತಾನುಗೃಹಗಳನ್ನು ಆರಂಭಿಸಲಾಗುವುದು. ಅಲ್ಲಿ ಸಾಮಾಗ್ರಿಗಳನ್ನು ಪ್ಯಾಕ್ ನಡೆಸುವ ನಿಟ್ಟಿನಲ್ಲಿ 15 ಕುಟುಂಬಶ್ರೀ ಕಾರ್ಯಕರ್ತರನ್ನು ನೇಮಿಸಲಾಗುವುದು. ಅಗತ್ಯವಿರುವವರು 04994255004 ಎಂಬ ನಂಬ್ರಕ್ಕೆ ಕರೆಮಾಡಬಹುದು. ಇವರಿಗೆ ವಾರ್ಡ್ ಮಟ್ಟದ ಜನಜಾಗೃತಿ ಸಮಿತಿ ಮೂಲಕ ಆಹಾರ ತಲಪಿಸಲಾಗುವುದು. ಆಹಾರ ಕಿಟ್ ಅಗತ್ಯವಿರುವ ಕುಟುಂಬಗಳೂ ಈ ನಂಬ್ರ ಮೂಲಕ ಕರೆಮಾಡಬಹುದು.

